ಬೆಳ್ತಂಗಡಿ: ಕೊಡವ ಸಮುದಾಯ ಮದ್ಯಪಾನ ನಿಷೇಧ ಮಾಡಿರುವುದನ್ನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ವಾಗತಿಸಿದ್ದಾರೆ.
ಕೊಡವ ಸಮುದಾಯದ ಮದುವೆಯ ಮುಹೂರ್ತ ಹಾಗೂ ಗಂಗಾ ಪೂಜಾ ಮುಂತಾದ ಸಮಾರಂಭಗಳಲ್ಲಿ ಮದ್ಯಪಾನದ ಬಳಕೆಯಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಕೊಡಗು ಜಿಲ್ಲೆಯ ಪೊನ್ನಂಪೇಟೆ ಕೊಡವ ಸಮಾಜದ ಮಹಾಸಭೆಯಲ್ಲಿ ನಿರ್ಣಯಿಸಿ ಈ ವಿಶೇಷ ನಿರ್ಧಾರವನ್ನು ಕೈಗೊಂಡಿರುವುದಾಗಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ಕಾಲಿಮಾದ ಮೋಟಯ್ಯ ಪತ್ರಿಕೆಯಲ್ಲಿ ಹೇಳಿಕೆ ನೀಡಿರುತ್ತಾರೆ. ಈ ನಿರ್ಣಯವನ್ನು ಮೀರಿ ಯಾರಾದರೂ ಮದ್ಯಪಾನ ನೀಡಿದ್ದಲ್ಲಿ ಇಪ್ಪತೈದು ಸಾವಿರ ರೂ ದಂಡವನ್ನು ವಿಧಿಸಲಾಗುವುದೆಂದು ತಿಳಿಸಿರುತ್ತಾರೆ.
ಪೊನ್ನಂಪೇಟೆಯ ಕೊಡವ ಸಮಾಜ ತೆಗೆದು ಕೊಂಡಿರುವ ಈ ನಿರ್ಧಾರ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಉತ್ತಮ ಕೊಡುಗೆಯಾಗಿದೆ. ಇಂತಹ ಮಾದರಿ ತೀರ್ಮಾನಗಳು ಪ್ರತಿಯೊಬ್ಬರು ಮನಗಂಡು ಮುಂದಕ್ಕೆ ಪವಿತ್ರವಾದ ಮದುವೆ ಹಾಗೂ ಧಾರ್ಮಿಕ ಸಮಾರಂಭಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಧ್ಯವಾಗುತ್ತದೆ.ಈ ನಿರ್ಧಾರವನ್ನು ಕೈಗೊಂಡಿರುವ ಪೊನ್ನಂಪೇಟೆ ಕೊಡವ ಸಮಾಜಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ||.ಡಿ. ವೀರೇಂದ್ರ ಹೆಗ್ಗಡೆಯವರು ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ. ಅಂತೆಯೇ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆಯು ಕಳೆದ 30 ವರ್ಷಗಳಿಂದ ದುಶ್ಚಟ ದುರಭ್ಯಾಸವಾದ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ,ಕೊಡಗು ಜಿಲ್ಲೆಯಲ್ಲಿಯೂ ಜಿಲ್ಲಾ ವೇದಿಕೆಗಳನ್ನು ರಚಿಸಿ ಪಿರಿಯಾಪಟ್ಟಣ, ಸೋಮವಾರಪೇಟೆ, ವಿರಾಜ್ಪೇಟೆ, ಅರಕಲಗೂಡು, ಕುಶಾಲನಗರ ,ಬೆಟ್ಟದಪುರ ಮುಂತಾದ ತಾಲೂಕು ಕೇಂದ್ರಗಳಲ್ಲಿ 50 ಶಿಬಿರಗಳನ್ನು ಸಂಘಟಿಸಿ 4401 ಜನರಿಗೆ ಪಾನಮುಕ್ತರಾಗಲು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವ್ಯಸನಮುಕ್ತರು ಸಾಧಕರಾಗಿ ಬದಲಾಗುತ್ತಿದ್ದು, ಈ ನಿರ್ಧಾರದಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮು. ಕೊರವಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್ ಮಂಜುನಾಥ್, ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪೈಸ್ ಉಪಸ್ಥಿತರಿದ್ದರು.