ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬಾರೆ,ಕುಂಟಾಡಿ,ಕುಕ್ಕಾಜೆ ಮೊದಲಾದ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಒಂಟಿ ಸಲಗ ದಾಳಿ ನಡೆಸಿ ಇಲ್ಲಿನ ಕೃಷಿಕರ ಅಡಕೆ,ತೆಂಗು,ಬಾಳೆ ಕೃಷಿಗೆ ಹಾನಿ ಉಂಟುಮಾಡಿದೆ. ಸ್ಥಳೀಯರು ಒಂಟಿ ಸಲಗವನ್ನು ತೋಟದಲ್ಲಿ ಕಂಡಿದ್ದು ಓಡಿಸಲು ಪ್ರಯತ್ನಿಸಿದ್ದಾರೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆ ಈ ಪರಿಸರದಲ್ಲಿ ಒಂಟಿಸಲಗ ಅಥವಾ ಎರಡು ಆನೆಗಳು ದಾಳಿ ನಡೆಸಿ ಕೃಷಿ ಹಾನಿ ಉಂಟು ಮಾಡಿದ್ದವು.
ತೋಟತ್ತಾಡಿ ಪ್ರದೇಶ ಇತ್ತೀಚೆಗೆ ಸ್ಯಾಟಲೈಟ್ ಫೋನ್ ಬಳಕೆ ನಿಗೂಢ ಸ್ಫೋಟ ಎಂಬ ವದಂತಿಗಳಿಂದ ರಾಜ್ಯಾದ್ಯಂತ ಸುದ್ದಿಯಾಗಿ ಪೊಲೀಸ್ ಇಲಾಖೆ ಇಲ್ಲಿ ಸಾಕಷ್ಟು ಪರಿಶೀಲನೆ ನಡೆಸಿತ್ತು. ಈ ಸಮಯ ಅಧಿಕಾರಿಗಳಿಗೆ ಕಾಡಾನೆಗಳ ಸಂಚಾರದ ಹಲವು ಕುರುಹುಗಳು ಕಂಡುಬಂದಿದ್ದವು.
ಪಟಾಕಿ ಕೊರತೆ
ಕಾಡಾನೆಗಳನ್ನು ಓಡಿಸಲು ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ, ಪಟಾಕಿಗಳನ್ನು ಪೂರೈಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಕ್ಷಣದ ಕ್ರಮವಾಗಿ ಇಲಾಖೆ ಅಗತ್ಯ ಇರುವಷ್ಟು ಪಟಾಕಿಗಳನ್ನು ನೀಡುವಂತೆ ಆಗ್ರಹಿಸಿದ್ದಾರೆ.
ಆನೆ ಕಂದಕ ಬೇಡಿಕೆ
ಆನೆ ಸಂಚಾರ ಇರುವ ಸ್ಥಳಗಳಲ್ಲಿ ಆನೆ ಕಂದಕ ನಿರ್ಮಿಸಿ ಅವುಗಳ ಸಂಚಾರವನ್ನು ಹತೋಟಿಗೆ ತರಬೇಕು. ಕಾಡಾನೆಗಳು ದಾಟುವ ಇಲ್ಲಿನ ಸ್ಥಳಗಳಿಗೆ ಆನೆ ಕಂದಕ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು ಇದರ ಕಾಮಗಾರಿಯನ್ನು ಕೂಡಲೇ ಆರಂಭಿಸುವಂತೆ ಸ್ಥಳೀಯರು ಇಲಾಖೆಯ ಗಮನಕ್ಕೆ ತಂದಿದ್ದಾರೆ.