ಉಜಿರೆ, ಜು.1: ಪದವಿ ಮತ್ತು ಸ್ನಾತಕೊತ್ತರ ಶಿಕ್ಷಣ ಪಡೆಯುವ ಹಂತಗಳಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಂಡು ಉನ್ನತ ಹುದ್ದೆಗಳನ್ನು ಪಡೆಯುವ ಮಹತ್ವಾಕಾಂಕ್ಷೆಯೊಂದಿಗೆ ವಿದ್ಯಾರ್ಥಿಗಳು ಮುನ್ನಡೆಯಬೇಕುಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯಕ್ತರಾದ ಸೌಮ್ಯ ಬಾಪಟ್ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧ.ಮಂ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ವಿವಿಧ ವಲಯಗಳಲ್ಲಿ ಸಾಧನೆಗೈದ ವಿದ್ಯಾರ್ಥಿ ಸಾಧಕರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಪದವಿ ಅಥವಾ ಸ್ನಾತಕೊತ್ತರ ಪದವಿ ಅಧ್ಯಯನ ಪೂರ್ಣಗೊಳ್ಳುವ ಹಂತದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸನ್ನದ್ಧಗೊಳ್ಳುವ ದೃಢ ಸಂಕಲ್ಪ ರೂಪಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಗೆ ಬೇಕಾದ ತರಬೇತಿಯನ್ನು ಪಡೆಯಬೇಕು. ವೃತ್ತಿಪರ ಕೋರ್ಸ್ಗಳಲ್ಲಿ ಅಧ್ಯಯನ ನಿರತರಾದವರು ಈ ನಿಟ್ಟಿನಲ್ಲಿಆಲೋಚಿಸಬೇಕು ಎಂದರು.
ಸ್ಪಧಾತ್ಮಕ ಪರೀಕ್ಷೆಗಳಿಗೆ ನಿಗದಿತವಾದ ವಿಷಯಗಳನ್ನು ಆಧರಿಸಿ ವ್ಯಾಪಕವಾಗಿ ಓದಿಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು. ನಿರ್ದಿಷ್ಟ ಪಠ್ಯ ಕ್ರಮದೊಂದಿಗೆ ಅದರ ವ್ಯಾಪ್ತಿಯ ಆಚೆಗೂ ತಿಳಿದುಕೊಳ್ಳುವ ಕುತೂಹಲವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳು ನಿರೀಕ್ಷಿಸುವ ಪ್ರತಿಭಾನ್ವಿತ ಸಾಮರ್ಥ್ಯವನ್ನು ಸಾಧ್ಯವಾಗಿಸಿಕೊಳ್ಳಬಹುದು ಎಂದು ತಿಳಿಸಿದರು.
ಸ್ಪಧಾತ್ಮಕ ಪರೀಕ್ಷೆಗಳಲ್ಲಿ ಬರೆಯುವ ಸಾಮರ್ಥ್ಯ ಮಾತ್ರವಲ್ಲದೇ ವ್ಯಕ್ತಿತ್ವದ ಸಮಗ್ರತೆಯ ಆಯಾಮವನ್ನೂ ಪರೀಕ್ಷಿಸಲಾಗುತ್ತದೆ. ಅವಕಾಶಗಳ ಲಭ್ಯತೆಗೆ ಸಂಬಂಧಿಸಿದ ಅನಿಶ್ಚಿತತೆಯೆ ಮಧ್ಯೆಯೇ ತಾಳ್ಮೆ ಮತ್ತು ನಿರಂತರ ಪರಿಶ್ರಮದ ಹೆಜ್ಜೆಗಳೊಂದಿಗೆ ವ್ಯಕ್ತಿತ್ವಕ್ಕೆ ಸಮಗ್ರತೆಯನ್ನು ಪಡೆದುಕೊಳ್ಳಬೇಕು. ಈ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯ ಎಂದು ಹೇಳಿದರು.
ಯಾವುದೇ ವೃತ್ತಿಪರ ವಲಯವನ್ನು ಪ್ರತಿನಿಧಿಸಿದರೂ ಸ್ಪಷ್ಟತೆಯನ್ನು ಕಂಡುಕೊಂಡು ಮುನ್ನಡೆಯುವ ಗುಣವನ್ನು ರೂಢಿಸಿಕೊಳ್ಳಬೇಕು. ವ್ಯಾಪಾರ, ವ್ಯವಹಾರ ಅಥವಾ ಆಡಳಿತಾತ್ಮಕ ರಂಗಗಳಲ್ಲಿ ಉನ್ನತವಾದದ್ದನ್ನು ಸಾಧಿಸಲು ಈ ಸ್ಪಷ್ಟತೆಯ ಪ್ರಜ್ಞೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕುಮಾರ ಹೆಗಡೆ ಬಿ.ಎ ಮಾತನಾಡಿದರು. ವಿದ್ಯಾರ್ಥಿಗಳು ಸ್ವಯಂ ಕೌಶಲ್ಯಗಳನ್ನು ಕಲಿಯುವುದರ ಕಡೆಗೆ ಹೆಚ್ಚು ಗಮನ ನೀಡಬೇಕು. ಬೌದ್ಧಿಕ ಸಾಮರ್ಥ್ಯ ಆಧಾರಿತ ಕೌಶಲ್ಯ ಪೂರ್ಣ ಅಭಿವ್ಯಕ್ತಿಯೊಂದಿಗೆ ಉನ್ನತ ಸಾಧನೆಗೈಯ್ಯುವ ನಿಟ್ಟಿನಲ್ಲಿ ಹೆಜ್ಜೆಯಿರಿಸಬೇಕು ಎಂದು ಸಲಹೆ ನೀಡಿದರು.
ಕಾಲೇಜಿನಲ್ಲಿ ಆಯೋಜಿಸಲ್ಪಟ್ಟ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪೆಡದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಯಾಗಿರುವ ಸೌಜನ್ಯ , ಧನ್ಯಾಶ್ರೀ ಬಿ.ಜಿ. ಪದವಿ ವಿಭಾಗದ
ವಿದ್ಯಾರ್ಥಿ ಪ್ರತಿನಿಧಿಯಾಗಿರುವ ಶ್ರಾವಣ್ಕುಮಾರ್, ರಾಜೇಶ್ವರಿ ನೆಜಿಕರ್, ನಿತೇಶ್, ಹಾಗೂ ಪ್ರಾಧ್ಯಪಕರು, ಆಡಳಿತ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಮತ್ತಿತ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಯಶ್ರೀ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಜಯಶ್ರೀ ನಿರೂಪಿಸಿದರು. ರಾಜೇಶ್ವರಿ ವಂದಿಸಿದರು.