ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯ ದುಗ್ಗಲಡ್ಕ ಸಮೀಪದ ನೀರಬಿದರೆ ಎಂಬಲ್ಲಿ ದನವೊಂದು ಆಕಸ್ಮಿಕವಾಗಿ ಆಳದ ಬಾವಿಗೆ ಬಿದ್ದಿದ್ದು, ಅದನ್ನು ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಸೋಮವಾರ ಸಂಭವಿಸಿದೆ.
ದೂರದಿಂದ ಓಡಿಕೊಂಡು ಬಂದ ದನವೊಂದು ನೀರಬಿದಿರೆ ಪರಮೇಶ್ವರ ಎಂಬವರ ಅಂಗಳದಲ್ಲಿರುವ ಬಾವಿಗೆ ಬಿದ್ದಿತ್ತು. ಇದನ್ನು ನೋಡಿದ ಪರಮೇಶ್ವರರು ತಕ್ಷಣ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದರು. ಅಗ್ನಿಶಾಮಕ ದಳದವರು ತಕ್ಷಣ ಆಗಮಿಸಿ ಬಾವಿಗೆ ಬಿದ್ದ ದನವನ್ನು ಊರವರ ಸಹಕಾರದೊಂದಿಗೆ ಮೇಲಕ್ಕೆತ್ತಿ ರಕ್ಷಿಸಿದರು.
ದನವು ಭಾರಿ ಆಳದ ಬಾವಿಗೆ ಬಿದ್ದಿದ್ದರೂ ಸಣ್ಣ ಪ್ರಮಾಣದ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದೆ.