ಬಂಟ್ವಾಳ : ಬಂಟ್ವಾಳ ತಾಲೂಕು ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಗುರುವಾರ ಆಟಿ ಅಮವಾಸ್ಯೆ ಪ್ರಯುಕ್ತ ತೀರ್ಥಸ್ನಾನ, ವಿಶೇಷ ಉತ್ಸವ ಜರಗಿತು.
ಅರ್ಚಕರಾದ ಜಯಶಂಕರ ಉಪಾಧ್ಯಾಯ ಮತ್ತು ಮಿಥುನ್ ಭಟ್ ನಾವಡ ಅವರು ವಿವಿಧ ಪೂಜೆಗಳನ್ನು ನೆರವೇರಿಸಿದರು. ಸಾವಿರಾರು ಭಕ್ತಾದಿಗಳು ಆಗಮಿಸಿ ಇಲ್ಲಿನ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನು ತೀರ್ಥಗಳೆಂಬ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು.
ಬಳಿಕ ಶ್ರೀ ಪಾರ್ವತೀ-ಪರಮೇಶ್ವರರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿದರು. ಮಧ್ವ ಓಂಕಾರ ಫ್ರೆಂಡ್ಸ್ ಮತ್ತು ಓಂಕಾರ ಮಹಿಳಾ ಘಟಕ ವತಿಯಿಂದ ಬೆಳಗ್ಗೆ ಪಾಲೆಯ ಕೆತ್ತೆ ಕಷಾಯ ವಿತರಣೆ ನಡೆಯಿತು. ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪುಳಿಮಜಲು, ಸಮಿತಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.
ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದ್ದುದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು ಬಂಟ್ವಾಳ ಗ್ರಾಮಾಂತರ, ಟ್ರಾಫಿಕ್ ಮತ್ತು ಪುಂಜಾಲಕಟ್ಟೆ ಪೊಲೀಸರು ವಾಹನ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದರು. ಮಧ್ವ ಶಿವಾಜಿ ಬಳಗ ಮತ್ತು ಶಿವಾಜಿ ಮಾತೃ ಬಳಗ, ವಿ.ಹಿಂ.ಪ., ಬಜರಂಗದಳ ಕಾವಳಮೂಡೂರು, ರಾಮ್ಸೇನಾ ಓಂಕಾರ ಘಟಕ ಕಾರಿಂಜ, ಉತ್ಸಾಹಿ ತರುಣ ವೃಂದ ವಗ್ಗ, ಗೋಕುಲ್ ಫ್ರೆಂಡ್ಸ್ ಗೋಕುಲ್ ನಗರ ಅವರು ಸಹಕರಿಸಿದ್ದರು. ಬಂಟ್ವಾಳ ಅಗ್ನಿಶಾಮಕದಳ ಲೈಫ್ ಬೋಟ್ ಸಹಿತ ಕರ್ತವ್ಯ ನಿರ್ವಹಿಸಿದ್ದರು