ಮಂಗಳೂರು: ದಕ್ಷಿಣ ವಲಯದ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (ಪಿಆರ್ ಸಿ ಐ) ವತಿಯಿಂದ ಜು.16ರ ಶನಿವಾರ ಸಂಜೆ 5.00 ಗಂಟೆಗೆ ಮಂಗಳೂರಿನ ಹೊಟೆಲ್ ಓಶಿಯನ್ ಪರ್ಲ್ ನಲ್ಲಿ ವಿಶ್ವ ಸಾರ್ವಜನಿಕ ಸಂಪರ್ಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಪಿಆರ್ಸಿಐ ಕರ್ನಾಟಕದ ಅಧ್ಯಕ್ಷರಾದ ಪಶುಪತಿ ಶರ್ಮ ಅವರು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿದರು.
ನವೆಂಬರ್ 11, 2022 ರಂದು ಕೋಲ್ಕತಾದಲ್ಲಿ ನಡೆಯಲಿರುವ ಪಿಆರ್ ಸಿ ಐ ನ 16 ನೇ ಜಾಗತಿಕ ಸಂವಹನ ಸಮಾವೇಶದ ‘ಥೀಮ್ ಲೋಗೋ’ವನ್ನು ಪಿಆರ್ ಸಿ ಐ ರಾಷ್ಟ್ರೀಯ ಅಧ್ಯಕ್ಷ ಡಾ.ಟಿ.ವಿನಯಕುಮಾರ್ ಅವರು ಬಿಡುಗಡೆಗೊಳಿಸುವರು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ಪಿಆರ್ ಸಿ ಐ ಮತ್ತು ವೈಸಿಸಿ ಮುಖ್ಯ ಮಾರ್ಗದರ್ಶಕ ಮತ್ತು ಅಧ್ಯಕ್ಷ ಎಮೆರಿಟಸ್ ಎಂ.ಬಿ.ಜಯರಾಂ, ಯೆನೆಪೋಯದ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ವಿಜಯಕುಮಾರ್, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಬಿ.ಕೆ.ರವಿ, ಪಿಆರ್ ಸಿಐ ದಕ್ಷಿಣ ವಲಯದ ಅಧ್ಯಕ್ಷೆ ಡಾ.ಟಿ.ಎಸ್.ಲತಾ, ವೈಸಿಸಿ ರಾಷ್ಟ್ರೀಯ ಮುಖ್ಯಸ್ಥ ಚಿನ್ನಮಯಿ ಪ್ರವೀಣ್ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದಲ್ಲಿ, ದಕ್ಷಿಣ ಭಾರತದ ಸಾಧಕರಿಗೆ ‘ವಲಯ ಪಿಆರ್ ಪ್ರಶಸ್ತಿಗಳು’ ಮತ್ತು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯ ಸಾಧಕರಿಗೆ ‘ರಾಜ್ಯ ಪಿಆರ್ ಪ್ರಶಸ್ತಿ’ ಪ್ರದಾನ ನಡೆಯಲಿದೆ.
ವಿಶ್ವೇಶ್ವರ ಭಟ್ ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು. ಎಂ.ಬಿ.ಜಯರಾಂ ಅಧ್ಯಕ್ಷ ಭಾಷಣ ನೀಡಲಿದ್ದು , ಸುಬ್ರಹ್ಮಣ್ಯ ಯಡಪಡಿತ್ತಾಯ, ಡಾ.ಎಂ.ವಿಜಯಕುಮಾರ್ ಬಿ.ಕೆ.ರವಿ ಹಾಗೂ ಟಿ.ವಿನಯಕುಮಾರ್ ಭಾಷಣ ಮಾಡಲಿದ್ದಾರೆ. ವೈಸಿಸಿ ರಾಷ್ಟ್ರೀಯ ಮುಖ್ಯಸ್ಥ ಚಿನ್ನಮಯಿ ಪ್ರವೀಣ್ ಅವರು ಪಿಆರ್ ಸಿ ಐ, ವೈಸಿಸಿ ಮತ್ತು ವರ್ಲ್ಡ್ ಪಿಆರ್ ಡೇ ಬಗ್ಗೆ ಮಾತನಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಚಾಪ್ಟರ್ ಚೇರ್ಮನ್ ರಾಘವೇಂದ್ರ ಹೊಳ್ಳ, ಕಾರ್ಯದರ್ಶಿ ಕೆನ್ಯೂಟ್ ಜೀವನ್ ಪಿಂಟೋ ಉಪಸ್ಥಿತರಿದ್ದರು.