ಕಾರವಾರ: ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಸಾಮೂಹಿಕ ರಾಜೀನಾಮೆ ನೀಡಿ, ಕಣ್ಣಿಗೆ ಪಟ್ಟಿ ಕಟ್ಟಿ ಬಿಜೆಪಿ ಸರಕಾರದ ವಿರುದ್ಧ ಧಿಕ್ಕಾರ ಹಾಕಿ ನಗರದಲ್ಲಿ ಪ್ರತಿಭಟನೆ ನಡೆಸಿದರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಕ ಸೇರಿದ್ದ ಬಿಜೆಪಿ ನಗರ ಹಾಗೂ ಗ್ರಾಮೀಣ ಯುವ ಮೋರ್ಚಾ ಪದಾಧಿಕಾರಿಗಳು ಹಾಗು ಪಕ್ಷದ ಪದಾಧಿಕಾರಿಗಳು ಸೇರಿ ಪ್ರವೀಣ ನೆಟ್ಟಾರೂ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ವೈಫಲ್ಯವನ್ನು ಖಂಡಿಸಿ ಕಾರವಾರ ನಗರ ಹಾಗೂ ಗ್ರಾಮೀಣ ಯುವ ಮೋರ್ಚಾದ 42 ಸದಸ್ಯರು ಸಾಮೂಹಿಕ ರಾಜೀನಾಮೆ ನೀಡಿ ಬಿಜೆಪಿ ಸರಕಾರದ ವಿರುದ್ಧ ಗುರುವಾರ ತೀವ್ರ ಪ್ರತಿಭಟನೆ ನಡೆಸಿದರು.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಗರದ ಜಿಲ್ಲಾಧಿಕಾರಿ ಕಚೇರಿ ಜಮಾಯಿಸಿದ ಗ್ರಾಮೀಣ ಹಾಗೂ ನಗರ ಘಟಕದ ಪದಾಧಿಕಾರಿಗಳು ಸರಕಾರದ ವೈಫಲ್ಯದ ವಿರುದ್ಧ ಕಿಡಿ ಕಾರಿದರು. ಈ ಸಂದರ್ಭದಲ್ಲಿ ಯುವಮೋರ್ಚಾ ಅಧ್ಯಕ್ಷ ಶುಭಂ ಕಳಸ ಮಾತನಾಡಿ ಬಿಜೆಪಿ ಪಕ್ಷ ಸಂಘಟನೆಗೆಂದು ಯುವಕರನ್ನು ಬಳಸಿಕೊಂಡು ರಾಜಕಾರಣ ಮಾಡಿ ಇದೀಗ ನಮ್ಮ ಯುವ ಕಾರ್ಯಕರ್ತರು ಹತ್ಯೆಗೀಡಾದಾಗ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸಿದ್ದೇವೆ ಎನ್ನುವ ನೀವು ಯಾಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ.
ಹೀಗೆ ಯುವಕರ ಸಾವು ನಮಗೆ ತೀವ್ರ ನೋವನ್ನುಂಟು ಮಾಡುತ್ತಿದ್ದು ನಮ್ಮ ಸರಕಾರದ ವಿರುದ್ಧ ನಾವೇ ಘೋಷಣೆ ಕೂಗುತ್ತಿದ್ದೇವೆ. ಹಿಂದೂ ಶಾಲು ಧರಿಸಿ ಬಂದಿರುವ ನಾವು ನಮ್ಮ ರಕ್ಷಣೆಗೆಂದು ಬಿಜೆಪಿ ಸರಕಾರವನ್ನು ಅಸ್ತಿತ್ವಕ್ಕೆ ತಂದಿದ್ದು ಇಲ್ಲಿ ನಮ್ಮ ಯುವಕರೇ ಸಾಯುತ್ತಿದ್ದರೆ ಮುದಿನ ದಿನ ನಮಗೂ ಇದೇ ಗತಿ ಬರಲಿದೆ ಎಂದರು.
ಮುಂದಿನ ಬಾರಿ ಬಿಜೆಪಿಗೆ ನಾವು ಬೆಂಬಲಿಸಬೇಕು ಎಂದಾದರೆ ಸಿಎಂ ಆಗುವವರು ಯಾರು ಎಂಬುದನ್ನು ಮೊದಲೇ ನಮಗೆ ತಿಳಿಸಬೇಕು. ಈ ರೀತಿಯ ಸಿಎಂ, ಗೃಹ ಸಚಿವರ ಆಳ್ವಿಕೆ ನಮಗೆ ಬೇಡ. ಚುನಾವಣೆ ಮುಂಚಿತವೇ ಮುಖ್ಯಮಂತ್ರಿಗಳ ಹೆಸರನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.