ಬಂಟ್ವಾಳ: ಶಿಕ್ಷಣ ನೀತಿಯಲ್ಲಿ ಶಾಸ್ತ್ರ, ಸಾಹಿತ್ಯಕ್ಕೆ ಆದ್ಯತೆ ಸಿಗಬೇಕು, ಆಗ ಮಾತ್ರ ಬುದ್ಧಿ ಮತ್ತು ಭಾವ ವಿಕಾಸ ವಾಗಲು ಸಾಧ್ಯ ಎಂದು ವಿಶ್ರಾಂತ ಉಪನ್ಯಾಸಕ ಶ್ರೀಧರ ಕೆ.ಅಳಿಕೆ ಹೇಳಿದರು.
ಅಮ್ಮುಂಜೆ ಅನುದಾನಿತ ಹಿ.ಪ್ರಾ.ಶಾಲೆಯ ಅಮ್ಮುಂಜೆ ಗುತ್ತು ಪಠೇಲ್ ಶಂಕರ್ ಶೆಟ್ಟಿ ವೇದಿಕೆಯಲ್ಲಿ ನಡೆಯುತ್ತಿರುವ ಬಂಟ್ವಾಳ ತಾಲೂಕಿನ 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಬೆಳಗ್ಗೆ ನಡೆದ ಸಮಾಜ, ಸಾಹಿತ್ಯ ಮತ್ತು ಶಿಕ್ಷಣ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಶಿಕ್ಷಣ ಔದ್ಯೋಗಿಕ ಸವಾಲುಗಳ ಕುರಿತು ವಿಚಾರ ಮಂಡಿಸಿದ ತುಂಬೆ ಪ.ಪೂ ಕಾಲೇಜು ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವರು,ಸ್ವಾವಲಂಬನೆ ಶಿಕ್ಷಣದ ಮೂಲ ಉದ್ದೇಶವಾಗಿದ್ದು ಸೃಜನ ಶೀಲತೆಯ ವಿದ್ಯಾರ್ಥಿಗಳ ಸೃಷ್ಟಿಯಾಗಬೇಕು,ಹೊಸ ಶಿಕ್ಷಣ ನೀತಿ ಹೊಸ ಬದಲಾವಣೆಗಳಿಗೆ ದಾರಿ ಮಾಡಿಕೊಡಲಿ ಎಂದು ಆಶಯ ವ್ಯಕ್ತಪಡಿಸಿದರು.
ಮೌಲಿಕ ಸಾಮಾಜಿಕ ಸಂಬಂಧಗಳ ಕುರಿತುವಿಚಾರ ಮಂಡಿಸಿದ ಶಿಕ್ಷಣ ಸಂಯೋಜಕಿ ಕೆ.ಸುಜಾತಾಕುಮಾರಿಯವರು,ಮೌಲ್ಯಗಳು ಕೇವಲಬೋಧನೆಯಿಂದ ಮಾತ್ರ ಸಾಧ್ಯವಿಲ್ಲ,ಅದನ್ನು ನಮ್ಮ ನಡವಳಿಕೆಗಳ ಮೂಲಕವಷ್ಟೇ ಹೇಳಿದರೆ ಹೆಚ್ಚುಮನದಟ್ಟಾಗಲು ಸಾಧ್ಯ, ಈ ನಿಟ್ಟಿನಲ್ಲಿ ಪ್ರತಿಯೊಂದು ಮನಸ್ಸುಗಳು ಮಾನವೀಯತೆಯ ಕಡೆ ಮುಖಮಾಡಬೇಕಿದೆ ಎಂದರು.
ಸಾಹಿತ್ಯ ಮತ್ತು ಯುವಜನಾಂಗದ ಕುರಿತು ವಿಚಾರ ಮಂಡಿಸಿದ ಅನಸೂಯಾ ಈಶ್ವರಚಂದ್ರರು, ಸಾಹಿತ್ಯದತ್ತ ಇಂದು ಯುವಜನಾಂಗ ಹೆಚ್ಚು ಒಲವು ತೋರುತ್ತಿದ್ದಾರೆಯಾದರೂ,ಇಂದಿನ ಸಾಹಿತ್ಯದ ಫಲವತ್ತತೆ ಕಡಿಮೆಯಾಗಿದೆ,ಹಿರಿಯರ ಅನುಭವದ ಸಾಹಿತ್ಯದ ಓದು ಮಾತ್ರ ಇದಕ್ಕೆ ಪರಿಹಾರ ನೀಡುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಪ್ರೊ.ಬಾಲಕೃಷ್ಣ ಗಟ್ಟಿಬೆಂಜನಪದವು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಕವಿತಾ, ಉದ್ಯಮಿ, ಭೂ ನ್ಯಾಯಮಂಡಳಿ ಸದಸ್ಯ ಸುಖೇಶ್ ಚೌಟ,ಪೊಳಲಿ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ರವಿ ಫೆರ್ನಾಂಡಿಸ್, ಮೊಡಂಕಾಪು ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುರೇಶ್ ನಂದೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದಯಕುಮಾರ್ ಅಮ್ಮುಂಜೆ, ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು. ಡಿ.ಚಂದ್ರಶೇಖರ ಭಂಡಾರಿ ವಂದಿಸಿದರು.