ಪುತ್ತೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಪಾರವಾದ ಸಾಧ್ಯತೆಗಳಿರುವುದು ನಿಜವಾಗಿದ್ದರೂ, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಆತಂಕಕಾರಿ ಎಂದು ಪುತ್ತೂರು ತಾಲೂಕು 21 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಶ್ರೀಧರ್ ಹೆಚ್.ಜಿ.ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿಅಂಬಿಕಾ ಸಮೂಹ ಸಂಸ್ಥೆಗಳ ಆವರಣ ಡಾ.ಕೋಡಿಕುಶಾಲಪ್ಪ ಗೌಡ ಪ್ರಾಂಗಣದ ಶ್ರೀಶಂಕರ ಸಭಾಂಗಣ ಲಲಿತಾಂಂಬಿಕಾ ವೇದಿಕೆಯಲ್ಲಿ ನಡೆದ ಪುತ್ತೂರು ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನ ಹೊಡೆತದಿಂದ ಚೇತರಿಸಿಕೊಳ್ಳಲು ಹೆಣಗಾಡುತ್ತಿರುವಾಗಲೇ ಹೊಸ ಶಿಕ್ಷಣ ನೀತಿ ಆತಂಕವನ್ನು ನಿರ್ಮಿಸಿದ್ದು, ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇದೇ ರೀತಿಯಲ್ಲಿ ಇಳಿಮುಖವಾದರೆ ಮುಂದಿನ ಮೂರು ವರ್ಷಗಳಲ್ಲಿ ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳ ತೀವ್ರ ಬರವನ್ನು ಎದುರಿಸಬೇಕಾಗುತ್ತದೆ ಎಂದ ಅವರು ಈ ಕುರಿತು ತುರ್ತು ಅಧ್ಯಯನಗಳು ನಡೆಯಬೇಕಿದೆ ಎಂದರು.
ತಾನು ಹೊಸ ಶಿಕ್ಷಣ ನೀತಿಯ ವಿರೋಧಿಯಲ್ಲ ಎಂದ ಅವರು, ಎನ್ ಇಪಿ ಯಲ್ಲಿ ಇರುವ ಕೆಲವು ಗೊಂದಲಗಳನ್ನು ಸರಿಪಡಿಸುವಂತೆ ಸಲಹೆ ನೀಡಿದರು.ಪದವಿ ಶಿಕ್ಷಣದ ಬಿ.ಎ.ತರಗತಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಅಧ್ಯಯನಕ್ಕೆ ಆಯ್ಕೆ ಮಾಡುವವರ ಸಂಖ್ಯೆಯೂ ಇಳಿಮುಖವಾಗುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಹೈಸ್ಕೂಲ್ ಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಎದುರಾಗಲಿದೆ ಎಂದವರು ಎಚ್ಚರಿಸಿದರು.
ಹೊರನಾಡಿನಲ್ಲಿ ಕನ್ನಡ ಎಂ.ಎ.ಮಾಡುವವರಿಗೆ ಇರುವ ಪ್ರೋತ್ಸಾಹ, ಆರ್ಥಿಕ ನೆರವು ಕರ್ನಾಟಕದಲ್ಲೂ ಸಿಗುವಂತಾಗಬೇಕು, ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ಪ್ರಯತ್ನಿಸುವಂತೆ ಅವರು ಸಲಹೆ ನೀಡಿದರು.ಕೃಷಿಗೆ ಸಂಬಂಧಿಸಿ ವಿವರಗಳು, ಭಾರತೀಯ ಸಂಸ್ಕೃತಿ, ಲಲಿತ ಕಲೆಗಳು, ಕಲಾಪ್ರಕಾರಗಳು ಶಾಲಾಪಠ್ಯಕ್ರಮದಲ್ಲಿ ಸೇರಬೇಕು, ಅದನ್ನು ಮಕ್ಕಳಿಗೆ ತಲುಪಿಸುವ ಶಿಕ್ಷಕರ ನೇಮಕವೂ ನಡೆಯಲಿ ಎಂದವರು ಒತ್ತಾಯಿಸಿದರು .
ಕ.ಸಾ.ಪ.ಅಧ್ಯಕ್ಷ ನಾಡೋಜ ಡಾ|ಮಹೇಶ್ ಜೋಷಿ ಸಮ್ಮೇಳನ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಓದುವಂತೆ ಬರೆಯುವ, ಬರೆಯುವಂತೆ ಮಾತನಾಡುವ, ಮಾತನಾಡಿದಂತೆ ನಡೆದುಕೊಳ್ಳುವ ಜನ ಕರಾವಳಿಯವರು, ಕನ್ನಡ ಭಾಷೆ ಎಲ್ಲ ಬಗೆಯಲ್ಲೂ ಒಂದು ಪರಿಪೂರ್ಣ ಭಾಷೆಯಾಗಿದ್ದು ಇದನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಂದು ಮನಸ್ಸುಗಳೂ ಕ್ರಿಯಾಶೀಲವಾಗಬೇಕು ಎಂದರು. ವಿದ್ಯಾರ್ಥಿ ಸಮೂಹವನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಕನ್ನಡದ ಗಟ್ಟಿತನವನ್ನು ಮುಂದಿನ ತಲೆಮಾರುಗಳಿಗೆ ತಲುಪಿಸುವ ಹೊಣೆಗಾರಿಕೆ ಯುವ ಸಮೂಹಕ್ಕಿದೆ ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಜಿ.ಕೃಷ್ಣ ಅವರು ಸಮ್ಮೇಳನಾಧ್ಯಕ್ಷರಿಗೆ ಧ್ವಜ ಹಸ್ತಾಂತರಿಸಿದರು. ನಗರ ಸಭೆ ಉಪಾಧ್ಯಕ್ಷೆ ವಿದ್ಯಾಗೌರಿ, ಪುತ್ತೂರು ಸಹಾಯಕ ಕಮೀಷನರ್ ಗಿರೀಶ್ ನಂದನ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪುತ್ತೂರು ತಹಶೀಲ್ದಾರ್ ನಿಸರ್ಗಪ್ರಿಯ, ಪುರಸಭಾ ಸದಸ್ಯ ಜಗನ್ನೀವಾಸ್ ರಾವ್ ವಿವಿಧ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರು, ಪುತ್ತೂರು ಘಟಕದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಕ.ಸಾ.ಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಸ್ತಾವನೆಗೈದರು. ಕಸಾ.ಪ ಜಿಲ್ಲಾ ಅಧ್ಯಕ್ಷ ಡಾ|ಎಂ.ಪಿ.ಶ್ರೀನಾಥ್ ಅವರು,ಕಸಾಪ ಅಧ್ಯಕ್ಷ ಮಹೇಶ್ ಜೋಶಿಯವರನ್ನು ಪರಿಚಯಿಸಿದರು. ವಿವೇಕಾನಂದ ಕಾಲೇಜು ಉಪನ್ಯಾಸಕ ಡಾ| ಮನಮೋಹನ್ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು.
ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ಪುಷ್ಪಲತಾ, ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.ವಂದಿಸಿದರು.ಕೋಶಾಧಿಕಾರಿ ಡಾ.ಹರ್ಷಕುಮಾರ್ ರೈ ನಿರ್ವಹಿಸಿದರು.