ಬಂಟ್ವಾಳ: ಕಳೆದ ನಾಲ್ಕು ವರ್ಷದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 262 ಕೋ.ರೂ.ಅನುದಾನವನ್ನು ಒದಗಿಸಲಾಗಿದ್ದು, ಕರಾವಳಿಯ ಪ್ರಮುಖ ಸಮಸ್ಯೆಗಳಾದ ಡೀಮ್ಡ್ ಅರಣ್ಯ,ಇ-ಸೊತ್ತು,ಕುಮ್ಕಿ,ಮರಳು ನೀತಿ ಸುಧಾರಣೆಯ ವಿಚಾರದಲ್ಲಿಯೂ ಬಿಜೆಪಿ ಸರಕಾರ ದಿಟ್ಟ ಹೆಜ್ಜೆ ಇರಿಸಿದೆ ಎಂದು ರಾಜ್ಯದ ಕಾನೂನು,ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
ಜಿಲ್ಲೆಯ ಜೀವನದಿ ನೇತ್ರಾವತಿ ನದಿಗೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಸುಮಾರು 135 ಕೋ.ರೂ.ವೆಚ್ಚದಲ್ಲಿ ಬಂಟ್ವಾಳಕ್ಕೆ ಸಮೀಪದ ಜಕ್ರಿಬೆಟ್ಟುವಿನಿಂದ ನರಿಕೊಂಬು ಗ್ರಾಮವನ್ನು ಸಂಪರ್ಕ ಬೆಸೆಯುವ ನಿಟ್ಟಿನಲ್ಲಿ ಅಣೆಕಟ್ಟು ಜತೆಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಶುಕ್ರವಾರ ನೇತ್ರಾವತಿ ನದಿ ಕಿನಾರೆಯಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸಣ್ಣ ನೀರಾವರಿ ಇಲಾಖೆ ಮಾತಿನಲ್ಲಿ ಸಣ್ಣದು,ಕೃತಿಯಲ್ಲಿ ದೊಡ್ಡದು ಮತ್ತು ಮಹತ್ವದ್ದಾಗಿದೆ,ಎತ್ತಿನಹೊಳೆ ಜಾರಿಯಾದಲ್ಲಿ ನಾವು ಫಲಾನುಭವಿಗಳಾಗಿದ್ದು,ಹಾಗಾಗಿ ಈ ಜಿಲ್ಲೆಯ ಋಣ ನಮ್ಮಮೇಲಿದೆ. ಅವಿಭಜಿತ ದ.ಕ.ಜಿಲ್ಲೆಯ ಅಂರ್ತಜಲ ವೃದ್ಧಿಗೆ ಸರ್ಕಾರ 3975 ಸಾವಿರ ಕೋ.ರೂ.ಮೀಸಲಿಟ್ಟು,ಪ್ರತಿ ವರ್ಷ 500 ಕೋ.ರೂ.ವನ್ನು ಬಿಡುಗಡೆಗೊಳಿಸಲಾಗುತ್ತದೆ.ಕಳೆದ ಬಾರಿಯಂತೆ ಈ ವರ್ಷವೂ ಬಜೆಟ್ ನಲ್ಲಿ ಮೀಸಲಿರಿಸಿ ಮಂಜೂರುಗೊಳಿಸಿದೆ ಎಂದರು.
ಅಂತರ್ಜಲ ವೃದ್ಧಿಯ ಜೊತೆಗೆ ಕೃಷಿ ಚಟುವಟಿಕೆ ಮತ್ತು ಕುಡಿಯುವ ನೀರಿಗೆ ಡ್ಯಾಂ ಸಹಾಯಕ ವಾಗಲಿದೆ ಎಂದ ಸಚಿವರು ಸಮುದ್ರಕ್ಕೆ ಹರಿದು ಹೋಗುವ ವ್ಯರ್ಥ ನೀರನ್ನು ಸಂಗ್ರಹಿಸಿ ಬಳಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುವ ಯೋಜನೆಗೆ ಪ್ರಾಥಮಿಕ ತಯಾರಿಗಳು ನಡೆಯುತ್ತಿದೆ ಎಂದರು.
ಋಣ ತೀರಿಸಲು ಸಾಧ್ಯವಿಲ್ಲ:
ನಮ್ಮ ಪಕ್ಷಕ್ಕೆ ದ.ಕ.ಮತ್ತು ಉಡುಪಿ ಜಿಲ್ಲೆ ಜನತೆ ಶಕ್ತಿತುಂಬಿದ್ದಾರೆ ಮತ್ತು ಆಶೀರ್ವಾದ ನೀಡುತ್ತಿದ್ದಾರೆ. ಇಲ್ಲಿಗೆ ಎಷ್ಟು ಯೋಜನೆ ಕೊಟ್ಟರೂ, ಋಣ ತೀರಿಸಲು ಸಾಧ್ಯವಿಲ್ಲ ಹಾಗಾಗಿ ನಮ್ಮ ಮೊದಲ ಆದ್ಯತೆ ದ.ಕ.ಜಿಲ್ಲೆಗೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ಸಭಾಧ್ಯಕ್ಷತೆ ವಹಿಸಿದ್ದ,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಎತ್ತಿನ ಹೊಳೆ ವಿರುದ್ದದ ಹೋರಾಟದ ಫಲವೇ ಪಶ್ಚಿಮ ವಾಹಿನಿ ಯೋಜನೆಯಾಗಿದ್ದು, ಜಿಲ್ಲೆಯ ನೀರಿನ ಹಾಹಾಕಾರ ತಡೆಯುವ ಕೆಲಸ ಎಂದೋ ಆಗಬೇಕಿತ್ತು, ಆದರೆ ಈಗ ಕಾಲ ಕೂಡಿ ಬಂದಿದೆ. ಈ ಡ್ಯಾಂ ನಿರ್ಮಾಣದಿಂದ ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ಸಿಗಲಿದೆ ಎಂದರು. ತುಂಬೆ ವೆಂಟೆಡ್ ಡ್ಯಾಂನಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರಿನ ಕೊರತೆಯಾದಲ್ಲಿ ಈ ಡ್ಯಾಂನಿಂದ ನೀರು ಪೂರೈಸುವ ಸಾಮಥ್ಯ೯ ಹೊಂದಲಿದೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಯವರು ಮಾತನಾಡಿ,ನೀರಿನ ಒಳಹರಿವು ಹೆಚ್ಚಾಗುವಂತಹ ಅಣೆಕಟ್ಟು ನಿರ್ಮಾಣ ಕಾರ್ಯದಂತಹ ಯೋಜನೆ ಅನುಷ್ಠಾನಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಅಭಿನಂದಿಸಿದರು.
ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ಮಾತನಾಡಿ,ಮಾಧುಸ್ವಾಮಿಯವರು ಸಣ್ಣ ನೀರಾವರಿ ಸಚಿವನಾಗಿ ರಾಜ್ಯದ ಎಲ್ಲೆಡೆಯ ನೀರಿನ ದಾಹ ತಣಿಸಿದ ಆಧುನಿಕ ಭಗೀರಥ ಎಂದು ಶ್ಲಾಘಿಸಿದರು.
ಮಂಗಳೂರು ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಗೋಕುಲ್ ದಾಸ್ ಸೇತುವೆ ಹಾಗೂ ಅಣೆಕಟ್ಟು ಯೋಜನೆಯ ಮಾಹಿತಿ ನೀಡಿ,ಒ 7.50 ಮೀ.ಅಗಲದ ಈ ಸೇತುವೆಯಲ್ಲಿ ವಾಹನ ಸಂಚಾರಕ್ಕೂ ಅವಕಾಶವಿದ್ದು ಅಣೆಕಟ್ಟು 21 ಗೇಟ್ ಹೊಂದಲಿದೆ. ಡ್ಯಾಂನಲ್ಲಿ ಕೇವಲ 4.50 ಮೀ.ಎತ್ತರದಲ್ಲಿ ನೀರು ಸಂಗ್ರಹಿಸಲಾಗುವುದು ಎಂದು ವಿವರಿಸಿದರಲ್ಲದೆ 36 ಕೋ.ರೂ.ಕರ್ಪೆಯ ಸೇತುವೆ ಮತ್ತು ಅಣೆಕಟ್ಟು ವಿನ ಕಾಮಗಾರಿ ಪೂರ್ಣಗೊಂಡಿದ್ದು,ಗುರುಪುರ ಮತ್ತು,ಹರೇಕಳ – ಅಡ್ಯಾರ್ ನಡುವಿನ ಸಂಪರ್ಕ ರಸ್ತೆ,ಅಣೆಕಟ್ಟು ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.
ಇಲಾಖಾ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ,ತಹಶೀಲ್ದಾರ್ ಡಾ.ಸ್ಮಿತಾ ರಾಮು,ಸುಲೋಚನಾ ಜಿ.ಕೆ.ಭಟ್,ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಷ್ಣುಕಾಮತ್, ನರಿಕೊಂಬು ಗ್ರಾ.ಪಂ.ಅಧ್ಯಕ್ಷೆ ವಿನುತಾ ಪುರುಷೋತ್ತಮ್,ಗುತ್ತಿಗೆದಾರ ರಾಜೇಂದ್ರ ಕಾರಂತ್ ವೇದಿಕೆಯಲ್ಲಿದ್ದರು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ ಸ್ವಾಗತಿಸಿದರು.ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.