ಬಂಟ್ವಾಳ: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾದ ಯುವಕನನ್ನು ಅದೇ ಗ್ರಾಮದ ಯುವಕನೋರ್ವ ಅನೈತಿಕ ಚಟುವಟಿಕೆಗೆ ಬಳಸಿ ಕೊಲೆಗೈದಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೋಳಂತೂರು ಗ್ರಾಮ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಆತನನ್ನು ಅದೇ ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಪಾತಾಳಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಕೊಲೆಗೀಡಾದ ಯುವಕನ ಮೃತದೇಹ ಪತ್ತೆಯಾಗಿಲ್ಲ.
ಘಟನೆ ವಿವರ: ಬೊಳಂತೂರು ನಿವಾಸಿ
ಸಮದ್ ಕಾಣೆಯಾಗಿರುವ ಕುರಿತು ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಸಮದ್ ನನ್ನು ಇರಾ ಸೈಟ್ ಪರಿಸರದ ಮುಳೂರುಪದವು ಗುಡ್ಡಕ್ಕೆ ಕರೆದೊಯ್ದ ರಹಿಮಾನ್ ಮೊದಲದಿನವೇ ಆತನನ್ನು ಕೊಲೆಗೈದಿದ್ದು, ಮಾರನೇ ದಿನ ಮತ್ತೊಬ್ಬ ಸ್ನೇಹಿತನನ್ನು ಆ ಸ್ಥಳಕ್ಕೆ ಕರೆದೊಯ್ದು ಕೊಲೆ ನಡೆಸಿರುವ ವಿಚಾರ ತಿಳಿಸಿದ್ದಾನೆ. ವಿಚಾರ ತಿಳಿದು ಭಯಗೊಂಡ ಆತನಿಂದ ಆರೋಪಿ ಕೃತ್ಯ ಬಯಲಾಗಿದೆ. ಸುದ್ದಿ ಹರಡುತ್ತಿದ್ದಂತೆಯೇ ರಹಿಮಾನ್ ಸಮದ್ ಮೃತದೇಹವನ್ನು ಸುಟ್ಟು ಹಾಕಿ ಹೊಂಡಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ. ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಇಡೀ ಪ್ರಕರಣದ ಚಿತ್ರಣ ಹೊರ ಬಿದ್ದಿದೆ. ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ಪ್ರಕರಣ ತನಿಖೆ ಹಾಗೂ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸರು ಯುವಕನ ಮೃತದೇಹವನ್ನು ಹೊರ ತೆಗೆಯಲು ಮಂಗಳವಾರ ಕಾರ್ಯಾಚರಣೆ ನಡೆಸಿದ್ದು, ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ಮುಂದೂಡಿದ್ದಾರೆ.