ಬಂಟ್ವಾಳ, ಆ.27: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದ ಲಾರಿ ಅಪಘಾತದಲ್ಲಿ ಬಿ.ಸಿ.ರೋಡ್ ಸಮೀಪದ ತಲಪಾಡಿ ನಿವಾಸಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಲಪಾಡಿ ನಿವಾಸಿ ಮುಹಮ್ಮದ್ ಇರ್ಷಾದ್ (37) ಮೃತಪಟ್ಟವರು. ಮಂಗಳೂರು ದಕ್ಕೆಯಿಂದ ಲಾರಿಯಲ್ಲಿ ಮೀನು ತುಂಬಿಸಿ ನಿನ್ನೆ ಮಧ್ಯಾಹ್ನ ಮನೆಯಿಂದ ಹೊರಟಿದ್ದ ಇವರು ರಾತ್ರಿ 12:15ರ ವೇಳೆಗೆ ಅಪಘಾತ ಸಂಭವಿಸಿ ಮೃತಪಟ್ಟಿದ್ದಾರೆ.
ಅಂಬೂರ್ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಯೊಂದಕ್ಕೆ ಢಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು ಮೃತ ಇರ್ಷಾದ್ ಲಾರಿಯಲ್ಲಿ ನಿದ್ದೆ ಮಾಡುತ್ತಿದ್ದರೆ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ನಿವಾಸಿ ಅಬ್ದುಲ್ ಅಝೀಝ್ ಎಂಬವರು ಲಾರಿ ಚಲಾಯಿಸುತ್ತಿದ್ದರು. ಅಬ್ದುಲ್ ಅಝೀಝ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ವಿದೇಶದಲ್ಲಿ ಉದ್ಯೋಗದಲ್ಲಿ ಇದ್ದ ಇರ್ಷಾದ್ ಲಾಕ್ ಡೌನ್ ಬಳಿಕ ಊರಿನಲ್ಲೇ ಬಾಕಿಯಾಗಿದ್ದು ಇತ್ತೀಚೆಗೆ ಲಾರಿಯೊಂದನ್ನು ಖರೀದಿಸಿ ಚೆನ್ನೈಗೆ ಮಂಗಳೂರಿನಿಂದ ಮೀನು ಸಾಗಾಟ ಮಾಡುತ್ತಿದ್ದರು. ಇರ್ಷಾದ್ ಅವರ ತಂದೆ ಐದು ತಿಂಗಳ ಹಿಂದೆ ನಿಧನರಾಗಿದ್ದಾರೆ. ಮೃತ ಇರ್ಷಾದ್ ತಾಯಿ, ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ.