ಮಂಗಳೂರು: ತುಳು ಭಾಷೆ ಹಾಗೂ ಅದರ ಸಂಸ್ಕೃತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸುತ್ತಾ ಪ್ರೋತ್ಸಾಹಿಸುತ್ತಾ ಇರುವ ಹೊರ ರಾಜ್ಯದ ತುಳು ಸಂಘಟನೆಗೆ ವಿಶೇಷ ಆದ್ಯತೆ ನೀಡಬೇಕು ಎಂಬ ಬೇಡಿಕೆಯನ್ನು ಸರಕಾರದ ಗಮನಕ್ಕೆ ತಂದು ಆ ಸಂಘಟನೆಗಳಿಗೆ ವಿಶೇಷ ಅನುದಾನದೊಂದಿಗೆ ಸರಕಾರದ ಮಾನ್ಯತೆ ಸಿಗುವಂತಾಗಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದರು.
ಅವರು ಗುಜರಾತ್ನ ಸೂರತ್ನಲ್ಲಿ ವಿವಿಧ ತುಳು ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಮಾತನಾಡಿದರು. ಕರ್ನಾಟಕ ಬಿಟ್ಟು ಹೊರ ರಾಜ್ಯ ಮತ್ತು ಹೊರ ರಾಷ್ಟ್ರದಲ್ಲಿ ತುಳು ಭಾಷಾಭಿಮಾನವನ್ನು ಹೆಚ್ಚಿಸುವ ಸಂಘಟನಾತ್ಮಕ ಕೆಲಸವನ್ನು ಮಾಡುತ್ತಿರುವ ಸಂಘಟನೆಗಳಿಗೆ ಗೌರವ ಸಿಗಬೇಕು, ಗುಜರಾತ್ ರಾಜ್ಯದಲ್ಲಿ ಬರೋಡವನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿರುವ ಶಶಿಧರ ಶೆಟ್ಟಿ ಅವರ ಶ್ರಮ ಹಾಗೂ ಸಂಘಟನಾತ್ಮಕ ನಾಯಕತ್ವದಿಂದ ಇಂದು ಸೂರತ್, ಸಹಿತ ಬರೋಡಾ, ಅಂಕ್ಲೇಶ್ವರ, ವಾಫಿ, ಅಹಮ್ಮದಾಬಾದ್ ಪ್ರದೇಶಗಳಲ್ಲಿ ತುಳು ಸಂಘಗಳು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದೆ. ನಮ್ಮ ತಾಯಿ ನೆಲದ ಭಾಷೆ, ಸಾಹಿತ್ಯದ ಗೌರವವನ್ನು ಉಳಿಸುವ ಇಂತಹ ವ್ಯಕ್ತಿಗಳ ಸಹಿತ ಸಂಘಟನೆಗೆ ಮನ್ನಣೆ ಸಿಕ್ಕಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಭೆಯ ನೇತೃತ್ವವನ್ನು ವಹಿಸಿದ್ದ ಬರೋಡ ತುಳು ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಅವರು ವಿಷಯವನ್ನು ಪ್ರಸ್ತಾಪಿಸಿ, ಗುಜರಾತ್ನಲ್ಲಿ ತುಳು ಭಾಷಿಗರು ತಮ್ಮ ವ್ಯವಹಾರದೊಂದಿಗೆ, ದಿನದ ಕಾರ್ಯದೊಂದಿಗೆ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿ, ಊರಿನ ಕಲಾವಿದರಿಗೆ ವಿಶೇಷ ಗೌರವ ಸಲ್ಲಿಸಿಕೊಂಡು, ತುಳು ಸಂಸ್ಕೃತಿಯನ್ನು ಅರಳಿಸುವ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವ ಜವಬ್ದಾರಿ ನಿರ್ವಹಿಸುವ ಇಂತಹ ಸಂಸ್ಥೆಗಳಿಗೆ ಕರ್ನಾಟಕ ಸರಕಾರವೂ ಸಹ ಪರೋಕ್ಷ ಸಹಾಯವನ್ನು ಮಾಡಬೇಕು ಅದನ್ನು ನೇರವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮೂಲಕ ಮಾಡಿದಲ್ಲಿ ಸಂಘಟನಾ ಶಕ್ತಿಗೆ ಮನ್ನಣೆ ಸಿಕ್ಕಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯೋಜನೆಯಲ್ಲಿ ಚಾವಡಿ ತಮ್ಮನ ಕಾರ್ಯಕ್ರಮವನ್ನು ಆಗಸ್ಟ್ ತಿಂಗಳಿನಲ್ಲಿ ಬರೋಡಾದಲ್ಲಿ ನಡೆಸುವುದೆಂದು ನಿರ್ಧರಿಸಲಾಯಿತು. ಪರಸ್ಪರ ಸಂವಹನ ಸಭೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ನಾಗೇಶ್ ಕುಲಾಲ್ ಕುಳಾಯಿ, ಬರೋಡ ತುಳು ಸಂಘದ ಗೌರವಾಧ್ಯಕ್ಷರು ದಯಾನಂದ ಬೊಂಟ್ರ, ಗೌರವ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಖಜಾಂಚಿ ವಾಸು ಪೂಜಾರಿ, ಕರ್ನಾಟಕ ಸಮಾಜ ಸೂರತ್ನ ಗೌರವ ಅಧ್ಯಕ್ಷರು ರಾಮಚಂದ್ರ ವಿ ಶೆಟ್ಟಿ, ಅಧ್ಯಕ್ಷರು ದಿನೇಶ್ ಬಿ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ನಿಕಟಪೂರ್ವ ಅಧ್ಯಕ್ಷರಾದ ಮನೋಜ್ ಪೂಜಾರಿ,ತುಳು ಸಂಘ ಅಂಕ್ಲೇಶ್ವರದ ರವಿನಾಥ್ ವಿ ಶೆಟ್ಟಿ -ಗೌರವಾಧ್ಯಕ್ಷರು, ಶಂಕರ ಕೆ. ಶೆಟ್ಟಿ- ಅಧ್ಯಕ್ಷರು, ಅಶೋಕ್ ಶೆಟ್ಟಿ- ಗೌರವ ಪ್ರಧಾನ ಕಾರ್ಯದರ್ಶಿ, ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ವಾಪಿಯ ಸದಾಶಿವ ಗುರುವಪ್ಪ ಪೂಜಾರಿ- ಗೌರವಾಧ್ಯಕ್ಷರು, ಬಾಲಕೃಷ್ಣ ಸದಾನಂದ ಶೆಟ್ಟಿ-ಅಧ್ಯಕ್ಷರು, ಉದಯ ಭೋಜ ಶೆಟ್ಟಿ- ಕಾರ್ಯದರ್ಶಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಗುಜರಾತ್ನ ಅಜಿತ್ ಎಸ್. ಶೆಟ್ಟಿ- ಅಧ್ಯಕ್ಷರು, ವಿಶಾಲ್ ಶಾಂತ- ಕಾರ್ಯದರ್ಶಿ, ತುಳು ಸಂಘ ಅಹಮದಬಾದ್ನ ಮೋಹನ್ ಪೂಜಾರಿ -ಗೌರವಾಧ್ಯಕ್ಷರು, ಅಪ್ಪು ಶೆಟ್ಟಿ- ಅಧ್ಯಕ್ಷರು, ಇವರ ಜೊತೆಯಲ್ಲಿ ಮಾಧವಶೆಟ್ಟಿ, ವಿಶಾಲ್ ಶೆಟ್ಟಿ, ಕೃಷ್ಣ ಶೆಟ್ಟಿ, ದಿನಕರ ಶೆಟ್ಟಿ, ಸದಾಶಿವ ಪೂಜಾರಿ, ಪ್ರದೀಪ್ ಪೂಜಾರಿ, ಉದಯ ಶೆಟ್ಟಿ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.