ಮಂಗಳೂರು: ನಗರದ ಹೊರವಲಯದಲ್ಲಿ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವುಗೊಳಿಸಿ. ಇಲ್ಲವೇ ಶಾಸಕರು, ಸಂಸದರು ರಾಜೀನಾಮೆ ಕೊಡಿ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಮುನೀರ್ ಕಾಟಿಪಳ್ಳ, ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್, ಟೋಲ್ ಸಂಗ್ರಹ ಕೇಂದ್ರ ಸ್ಥಳೀಯ ಸಂಸದರು ಹಾಗೂ ಶಾಸಕರುಗಳ ಬೇಜವಾಬ್ದಾರಿತನದಿಂದ ಏಳು ವರ್ಷಗಳಿಂದ ಅಕ್ರಮವಾಗಿ ಸುಂಕ ವಸೂಲಿ ನಡೆಸುತ್ತಾ ಬಂದಿದೆ.
ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಸತತವಾಗಿ ಹೋರಾಟಗಳನ್ನು ಸಂಘಟಿಸಿದೆ. ಹೋರಾಟಗಳು ತೀವ್ರಗೊಂಡಾಗಲೆಲ್ಲ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಟೋಲ್ ಗೇಟ್ ಮುಚ್ಚುವ ಭರವಸೆ ನೀಡಿ ಪ್ರತಿಭಟನೆಯ ತೀವ್ರತೆ ಕುಗ್ಗಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಕಳೆದ ಮಾರ್ಚ್ ತಿಂಗಳಲ್ಲಿ ಟೋಲ್ ತೆರವು ಹೋರಾಟ ತೀವ್ರ ಸ್ವರೂಪ ಪಡೆದಾಗ ಸಂಸದರು ದೆಹಲಿಯಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಕೇಂದ್ರವನ್ನು ನವ ಮಂಗಳೂರು ಬಂದರು ಒಳಭಾಗಕ್ಕೆ ವರ್ಗಾಯಿಸಲು ಸಚಿವರು ಸೂಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಮಾರ್ಚ್ 22 ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರೆಗೆ ಸಾವಿರಾರು ಜನರ ಪಾದಯಾತ್ರೆ ನಡೆದಿತ್ತು. ಅದೇ ದಿನ ಸಚಿವ ನಿತಿನ್ ಗಡ್ಕರಿಯವರು 10 ಕಿ ಮಿ ಒಳಗಡೆ ಇರುವ ಎಲ್ಲಾ ಟೋಲ್ ಸಂಗ್ರಹ ಕೇಂದ್ರಗಳನ್ನು 90 ದಿನಗಳ ಒಳಗಡೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಪ್ರಕಟಿಸಿದ್ದರು.
ಸಚಿವರ ಅದೇ ಮಾತನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಮಂಗಳೂರಿನಲ್ಲಿ ಪುನರುಚ್ಚಿಸಿ 90 ದಿನಗಳಲ್ಲಿ, ಸುರತ್ಕಲ್ ಟೋಲ್ ಕೇಂದ್ರ ತೆರವುಗೊಳ್ಳಲಿದೆ ಎಂದು ಜಿಲ್ಲೆಯ ಜನತೆಗೆ ಮಾತುಕೊಟ್ಟಿದ್ದರು. ಈ ಸ್ಪಷ್ಟವಾದ ಭರವಸೆಯ ಕಾರಣಕ್ಕೆ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಸಚಿವರು ಲೋಕಸಭೆಯಲ್ಲಿ ಪ್ರಕಟನೆ ನೀಡಿ ಜೂನ್ 22ಕ್ಕೆ 90 ದಿನಗಳು ಪೂರ್ತಿಗೊಳ್ಳುತ್ತಿದೆ. ಆದರೆ ಸುರತ್ಕಲ್ ತಾತ್ಕಾಲಿಕ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಯಾವುದೇ ಕ್ರಮಗಳು ಈವರೆಗೆ ಆಗಿಲ್ಲ ಎಂದು ಕಿಡಿಕಾರಿದರು.