ಮೂಡುಬಿದಿರೆ: ಕೊಣಾಜೆ ಕಲ್ಲು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. ಇದೀಗ ಮೂಡುಬಿದಿರೆ ತಾಲೂಕಿನ ಕೊಣಾಜೆಕಲ್ಲು ಕಲ್ಮನೆ ಸಮಾಧಿಯ ಒಳಭಾಗದಲ್ಲಿ ಸುಟ್ಟ ಆವಿಗೆ ಮಣ್ಣಿನ ಅಪರೂಪದ ಶಿಲ್ಪಗಳು ಪತ್ತೆಯಾಗಿವೆ.
ಹರಪ್ಪ ನಾಗರಿಕತೆ ಅಥವಾ ತಾಮ್ರ ಶಿಲಾಯುಗ ಸಂಸ್ಕೃತಿಯ ನಂತರ ಬೃಹತ್ ಶಿಲಾಯುಗದ ಪದರೀಕೃತ ಸನ್ನಿವೇಶದಲ್ಲಿ ದೊರೆತ ಈ ಶಿಲ್ಪಗಳು, ಭಾರತೀಯ ಸಾಂಸ್ಕೃತಿಕ ಇತಿಹಾಸ ಅಧ್ಯಯನದ ಮಹತ್ವದ ಪ್ರಾಚ್ಯಾವಶೇಷಗಳಾಗಿವೆ. ತುಳುನಾಡಿನ ಮಾತೃಮೂಲದ ಸಾಮಾಜಿಕ ವ್ಯವಸ್ಥೆ ಹಾಗೂ ದೈವಾರಾಧನೆಯ ಪ್ರಾಚೀನತೆಯ ಅತ್ಯಂತ ವಿಶ್ವಾಸಾರ್ಹ ದಾಖಲೆಗಳಾಗಿವೆ’ ಎಂದು ಸಂಶೋಧಕ, ಮೂಲ್ಕಿಯ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದಲ್ಲಿ ಉಪನ್ಯಾಸಕರಾಗಿ ನಿವೃತ್ತರಾಗಿರುವ ಟಿ. ಮುರುಗೇಶಿ ಅವರು ತಿಳಿಸಿದ್ದಾರೆ.
‘ರಾಜ್ಯದಲ್ಲಿ ಇದೇ ಮೊದಲಬಾರಿಗೆ ಬೃಹತ್ ಶಿಲಾಯುಗದ ಸಮಾಧಿಯ ಒಳಗೆ ಕಾಮಧೇನು ಅಥವಾ ಮಾತೃದೇವತೆ ಶಿಲ್ಪಗಳು ಪತ್ತೆಯಾಗಿವೆ. ಈ ಶಿಲ್ಪಗಳು, ಮಾನವ ದೇಹ ಮತ್ತು ನಂದಿಯ ಮುಖವನ್ನು ಹೊಂದಿವೆ. ಅವುಗಳಿಗೆ ಸ್ತ್ರೀ ತತ್ವದ ಸಂಕೇತವಾಗಿ ಎರಡು ಮೊಲೆಗಳನ್ನು ಅಂಟಿಸಲಾಗಿದೆ. ಇಂತಹ ಒಂದು ಶಿಲ್ಪ ಕೇರಳದ ಮಲಪುರದ ಶಿಲಾಯುಗದ ಕುಂಭ ಸಮಾಧಿಯಲ್ಲಿ ದೊರೆತಿರುವುದನ್ನು ಬಿಟ್ಟರೆ, ದೇಶದ ಎಲ್ಲೂ ಪತ್ತೆಯಾಗಿಲ್ಲ. ಈಜಿಪ್ಟ್ನಲ್ಲಿ ಇಂಥ ಶಿಲ್ಪಗಳು ವ್ಯಾಪಕವಾಗಿ ಕಂಡುಬಂದಿವೆ’ ಎಂದು ಅವರು ತಿಳಿಸಿದ್ದಾರೆ.
“ಈ ಶಿಲ್ಪಗಳು ಮಾತೃಮೂಲ ಸಂಸ್ಕೃತಿಯ ಪ್ರಬಲ ಸಾಕ್ಷ್ಯಗಳಾಗಿವೆ. ಈ ಶಿಲ್ಪ ಲಕ್ಷಣಗಳು ಇಲ್ಲಿನ ದೈವಾರಾಧನೆಯ ಶಿಲ್ಪಗಳ ಅತ್ಯಂತ ಪ್ರಾಚೀನ ಪುರಾವೆಗಳಾಗಿವೆ. ಇವುಗಳ ಕಾಲಮಾನವನ್ನು ಕನಿಷ್ಠ ಕ್ರಿ.ಪೂ 30) ಅಥವಾ 700 ಆಗಿರಬಹುದು ಎಂದು ಅಂದಾಜಿಸಲಾಗಿದೆ’ ಎಂದು ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ.
ಶ್ರೇಯಸ್ ಮಣಿಪಾಲ್, ಗೌತಮ್ ಬೆಳಣ್, ಶ್ರೇಯಸ್ ಬಂಟಕಲ್, ರವೀಂದ್ರ ಕುತ್ತಾ, ಕಾರ್ತೀಕ್, ಅಕ್ತತಾ ಮತ್ತು ಪ್ರಜ್ಞಾ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದರು.