ಮೂಡುಬಿದಿರೆ: ಪಣಪಿಲ ಕೊಟ್ಟರಿಬೆಟ್ಟು ರಾಜ್ ಫಿಶ್ ಫಾರ್ಮಿಂಗ್ನಲ್ಲಿ `ಮತ್ಸ್ಯ ಮಿಲನ’ ಮೀನು ಸಾಕಾಣಿಕೆ ಮಾಹಿತಿ ಕಾರ್ಯಾಗಾರ ಹಾಗೂ ಮೀನು ಹಿಡಿಯುವ ಕಾರ್ಯಕ್ರಮ ಸೋಮವಾರ ನಡೆಯಿತು.
ಮಂಗಳೂರು ಕೆ.ವಿ.ಕೆ ಮೀನುಗಾರಿಕೆ ವಿಭಾಗದ ವಿಜ್ಞಾನಿ ಡಾ.ರವೀಂದ್ರ ಗೌಡ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೀನುಗಾರಿಕೆ ಲಾಭದಾಯಕ ಕೃಷಿಯಾಗಿದೆ. ದ.ಕ ಜಿಲ್ಲೆಯಲ್ಲಿ ಒಳಗಾಡು ಮೀನುಗಾರಿಕೆ ಮತ್ತು ಮೀನುಪಾಲನೆಗೆ ಹೆಚ್ಚಿನ ಬೇಡಿಕೆ ಇದೆ. ಕೃಷಿ ಹೊಂಡದಲ್ಲೂ ವಿವಿಧ ರೀತಿಯ ಮೀನಿನ ಮರಿಗಳನ್ನು ಸಾಕುವುದರಿಂದ ಪರ್ಯಾಯ ರೀತಿಯಲ್ಲಿ ಆದಾಯಗಳಿಸಬಹುದು ನೀರಾವರಿಗೂ ಆದ್ಯತೆ ನೀಡಿದಂತಾಗಿದೆ ಎಂದರು.
ಮಂಗಳೂರು ಕೆವಿಕೆಯ ಹಿರಿಯ ವಿಜ್ಞಾನಿ ಡಾ.ರಮೇಶ್ ಅಧ್ಯಕ್ಷತೆಯನ್ನು ವಹಿಸಿದರು. ಕರಾವಳಿಗರು ಮೀನು ಪ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೀನುಗಳ ಸಂಖ್ಯೆ ಕಡಿಮೆಯಾಗಿದೆ ಮೀನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಮೀನು ಸಾಕಾಣಿಕೆ ಅನಿವಾರ್ಯ. ಮೀನು ಕೃಷಿಕರಿಗಾಗಿ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಮತ್ತು ಮೀನು ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಮತ್ತು ಆದಾಯ ದ್ವಿಗುಣ ಮಾಡುವ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ ಎಂದರು.
ದರೆಗುಡ್ಡೆ ಗ್ರಾಪಂ ಸದಸ್ಯ ಮುನಿರಾಜ ಹೆಗ್ಡೆ, ದರೆಗುಡ್ಡೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಿನೋಧರ ಪೂಜಾರಿ, ಪ್ರಗತಿಪರ ಕೃಷಿಕ, ಶಿರ್ತಾಡಿ ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಅತಿಥಿಗಳಾಗಿ ಭಾಗವಹಿಸಿದ್ದರು. ಕೊಟ್ಟಾರಿಬೆಟ್ಟು ಮನೆಯ ಯಜಮಾನ ದೇವರಾಜ ಕೋಟ್ಯಾನ್ ಉಪಸ್ಥಿತರಿದ್ದರು. ರಾಜೇಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಬಲೆ ಹಾಕಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಯಿತು.
ಮೀನು ಕೃಷಿಕರ ದಿನದ ಅಂಗವಾಗಿ ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ.ಬೀದರ್, ಭಾ.ಕೃ.ಸಂ.ಪ. ಕೃಷಿ ವಿಜ್ಞಾನ ಕೇಂದ್ರ ದ.ಕ.ಮಂಗಳೂರು ಮತ್ತು ಮೀನುಗಾರಿಕೆ ಇಲಾಖೆ, ದ.ಕ.ಜಿಲ್ಲಾ ಪಂಚಾಯತ್ ಇವುಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.