ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ರೌಡಿಶಂ ತಾರಕಕ್ಕೇರಿದ್ದು, ಅಟ್ಟಾಡಿಸಿಕೊಲೆ ಮಾಡುವುದು ಮೇಲಿಂದ ಮೇಲೆ ನಡೆಯುತ್ತಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ನಡುವೆ ನಾಲ್ಕೈದು ಮಂದಿ ಸೇರಿ ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಮಚ್ಚು ಲಾಂಗ್ ನಿಂದ ಕೊಚ್ಚಿ ಕೊಲೆಗೈದ ಘಟನೆ ಮಂಗಳವಾರ ರಾತ್ರಿ ಮಂಡ್ಯದ ಗಾಂಧಿನಗರದಲ್ಲಿ ನಡೆದಿದೆ.
ಮಂಡ್ಯದ ಗಾಂಧಿನಗರ 4ನೇ ಕ್ರಾಸ್ ನಿವಾಸಿ ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ಕುಮಾರ್ ಎಂಬುವರ ಪುತ್ರ ಅಕ್ಷಯ್ ಅಲಿಯಾಸ್ ಗಟ್ಲು (22) ದುಷ್ಕರ್ಮಿಗಳ ಮಚ್ಚಿನೇಟಿಗೆ ಬಲಿಯಾದವನು. ಈತ ಹೊಸಹಳ್ಳಿ ರಸ್ತೆಯ ಟೀ ಅಂಗಡಿ ಬಳಿ ನಿಂತಿದ್ದ ವೇಳೆ ನಾಲ್ಕೈದು ಮಂದಿ ಮಚ್ಚು, ಲಾಂಗ್ ಹಿಡಿದು ಬಂದು ಅಟ್ಯಾಕ್ ಮಾಡಿದ್ದಾರೆ.
ಈ ವೇಳೆ ಅಕ್ಷಯ್ ಅವರಿಂದ ತಪ್ಪಿಸಿಕೊಂಡು ಗಾಂಧಿನಗರ ನಾಲ್ಕನೇ ಕ್ರಾಸ್ ಗೆ ನುಗ್ಗಿದ್ದಾನೆ. ಆದರೆ ಹಿಂದೆಯೇ ಆತನನ್ನು ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ಸ್ಟೇರ್ ಕೇಸ್ ಬಳಿ ಬಿದ್ದ ಅಕ್ಷಯ್ ಮೇಲೆ ಮಚ್ಚು-ಲಾಂಗ್ ಬೀಸಿದ್ದಾರೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಪಶ್ಚಿಮ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತನ ತಂದೆ ಕುಮಾರ್ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು, ದುಷ್ಕರ್ಮಿಗಳು ಪತ್ತೆಗೆ ಮುಂದಾಗಿದ್ದಾರೆ. ಕೊಲೆಗೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.