ಬಂಟ್ವಾಳ : ಹಿಜಾಬ್ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಅಮೀರ್ ಎ ಶರೀಯತ್ನ ಮೌಲಾನಾ ಸಗೀರ್ ಅಹ್ಮದ್ ಕರೆ ನೀಡಿರುವ ಸ್ವಯಂಪ್ರೇರಿತ ರಾಜ್ಯ ಬಂದ್ಗೆ ಬಂಟ್ವಾಳ ತಾಲೂಕಿನಾದ್ಯಂತ ಬೆಂಬಲ ವ್ಯಕ್ತವಾಗಿದೆ.
ಮುಸ್ಲಿಂ ಸಮುದಾಯದವರಿಗೆ ಸೇರಿದ ಅಂಗಡಿಗಳು, ಮಳಿಗೆಗಳು, ಹೊಟೇಲ್ ಗಳು ಬಂದ್ ಆಗಿದ್ದು, ಬಸ್, ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳು, ಮದ್ರಸಗಳಿಗೆ ರಜೆ ಸಾರಲಾಗಿದೆ. ಅಲ್ಲದೆ ಕಲ್ಲಡ್ಕ, ಪಾಣೆಮಂಗಳೂರು ಗೂಡಿನಬಳಿ, ಬಂಟ್ವಾಳ ಕೆಳಗಿನ ಪೇಟೆಯ ಬಹುತೇಕ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಸ್ಲಿಂ ಮಾಲಕತ್ವದ ಕಚೇರಿಗಳು, ವರ್ಕ್ ಶಾಪ್ಗಳು, ತರಕಾರಿ ಅಂಗಡಿ, ಮೀನು ಮಾರಾಟದ ಅಂಗಡಿಗಳು,ಸಾರಿಗೆ ಸಂಸ್ಥೆಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ.
ವಿಟ್ಲದಲ್ಲೂ ಪೂರ್ಣ ಬೆಂಬಲ
ಕರ್ನಾಟಕ ಬಂದ್ ಕರೆಗೆ ವಿಟ್ಲದಲ್ಲಿ ಎಲ್ಲಾ ಮುಸ್ಲಿಂ ವರ್ತಕರು ಬೆಂಬಲ ಸೂಚಿಸಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದಾರೆ. ಕರ್ನಾಟಕ ಬಂದ್ ಗೆ ಕರೆ ನೀಡಿರುವುದನ್ನು ವಿಟ್ಲ ಮುಸ್ಲಿಂ ಒಕ್ಕೂಟ ಬೆಂಬಲ ಸೂಚಿಸಿ ವಿಟ್ಲ ಸುತ್ತಮುತ್ತಲಿನ ವರ್ತಕರಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ಎಲ್ಲ ಮುಸ್ಲಿಂ ವರ್ತಕರು ಬಂದ್ ಗೆ ಬೆಂಬಲ ಸೂಚಿಸಿದ್ದಾರೆ. ಮಸೀದಿ ಅಧೀನದಲ್ಲಿರುವ ಮದರಸಗಳಿಗೆ ರಜೆ ನೀಡಲಾಗಿತ್ತು.
ಹೈಕೋರ್ಟ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಮುಸ್ಲಿಂ ಸಮುದಾಯ ಗುರುವಾರ ನಡೆಸಿದ ಕರ್ನಾಟಕ ಬಂದ್ ಗೆ ಕಾವಳ ಮುಡೂರು ಗ್ರಾ.ಪಂ.ನ ಎಸ್ ಡಿಪಿ ಐ ಬೆಂಬಲಿತ ಸದಸ್ಯರಾದ ಶೈನಾಝ್ ಎನ್ ಸಿ ರೋಡ್ ಹಾಗೂ ಸಫಾ ಸಲ್ಮಾ ಕಾವಳಕಟ್ಟೆ ಯವರೂ ಕೂಡ ವಸತಿ ಯೋಜನೆಯ ಸಭೆಯನ್ನು ಬಹಿಷ್ಕರಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು.