ಬೆಳ್ತಂಗಡಿ: ಹಿಜಾಬ್ ವಿಚಾರವಾಗಿ ರಾಜ್ಯದಲ್ಲಿ ಹುಟ್ಟಿರುವ ಸಮಸ್ಯೆ ಕುರಿತು ಹೈ ಕೋರ್ಟ್ ತೀರ್ಮಾನ ಯಾರ ಪರವೇ ಬಂದರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕು ಎಂಬ ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ವೃತ್ತದಿಂದ ಫೆ.11ರಂದು ರೂಟ್ ಮಾರ್ಚ್ ನಡೆಸಲಾಯಿತು.
ಹೈಕೋರ್ಟ್ ತೀರ್ಪು ಬಂದ ಬಳಿಕ ಯಾವುದೇ ರೀತಿಯ ಪ್ರತಿಭಟನೆ, ಘೋಷಣೆ, ವಿಜಯೋತ್ಸವ ಮಾಡುವಂತಿಲ್ಲ. ಹೈಕೋರ್ಟ್ ತೀರ್ಮಾನವನ್ನು ಗೌರವಿಸಬೇಕು ಎಂಬ ನೆಲೆಯಲ್ಲಿ ಬೆಳ್ತಂಗಡಿ ವೃತ್ತದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬಂದಿ ರೂಟ್ ಮಾರ್ಚ್ ನಡೆಸಿದರು.
ಬೆಳ್ತಂಗಡಿ ಅಯ್ಯಪ್ಪ ಗುಡಿಯಿಂದ ಪೊಲೀಸ್ ಠಾಣೆವರೆಗೆ ಮಾರ್ಚ್ ನಡೆಸಿದರು. ವೃತ್ತನಿರೀಕ್ಷಕರಾದ ಶಿವಪ್ರಸಾದ್ ಬಿ., ಉಪನಿರೀಕ್ಷಕರಾದ ನಂದಕುಮಾರ್ ಎಂ.ಎಂ., ಸಂಚಾರಿ ಉಪನಿರೀಕ್ಷಕರಾದ ಓಡಿಯಪ್ಪ ಗೌಡ, ಸಿ.ಟಿ.ಲಕ್ಷ್ಮಣ್ ಉಪಸ್ಥಿತರಿದ್ದರು. ವೇಣೂರು, ಪೂಂಜಾಲಕಟ್ಟೆ, ಬೆಳ್ತಂಗಡಿ, ಧರ್ಮಸ್ಥಳ ಠಾಣೆಯ 70 ಮಂದಿ ಭಾಗವಹಿಸಿದರು.