ಮಂಗಳೂರು: ನಗರದ ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಹಿಜಾಬ್ ಸಮಸ್ಯೆ ತಾರಕಕ್ಕೇರಿದೆ. ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್ ಧರಿಸಬೇಡಿ ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದ್ದಕ್ಕೆ, ರೊಚ್ಚಿಗೆದ್ದ ವಿದ್ಯಾರ್ಥಿನಿಯರು ಕೋರ್ಟ್ ಆದೇಶ ಬರಲಿ ಮತ್ತೆ ನೋಡುವ ಎಂದು ಸವಾಲೆಸೆದಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಉಪನ್ಯಾಸಕರಿಗೂ ಹಿಜಾಬ್ ತೆಗೆದು ಬರುವಂತೆ ಸೂಚನೆ ನೀಡಲಾಗಿದೆ. ಅತ್ತ ಹಿಜಾಬ್ ಧರಿಸುತ್ತೇವೆ ಎಂದು ಪಟ್ಟು ಹಿಡಿದ ವಿದ್ಯಾರ್ಥಿನಿಯರು ಟಿಸಿ ಕೊಡಿ ಇಲ್ಲವೇ ಕೋರ್ಟ್ ಆದೇಶ ಬರುವವರೆಗೆ ರಜೆ ಕೊಡಿ ಎಂದು ಪ್ರತಿಭಟನೆಗೆ ಇಳಿದ್ರು. ಈ ವಿಷಯ ತಿಳಿದ ಉಳ್ಳಾಲ ಪೊಲೀಸರು ಘಟನಾ ಸ್ಥಳಕ್ಕೆ ಬಂದಾಗ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.
ವಿಷಯ ಅರಿತ ಶಾಸಕ ಯು.ಟಿ ಖಾದರ್ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಿದರು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ, ವಿದ್ಯಾಭ್ಯಾಸ ಹಾಳಾಗಬಾರದು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಎಲ್ಲವೂ ಸರಿ ಹೋಗುವವರೆಗೆ ಪಿ.ಯು ಕಾಲೇಜಿಗೆ ರಜೆ ಘೋಷಣೆ ಮಾಡುವಂತೆ ಸೂಚಿಸಿದ್ದಾರೆ.