ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಕಾಯರ್ತೋಡಿ ರಸ್ತೆಗೆ ಕಾರನ್ನು ಪ್ರವಾಸಿಗರು ಕಾರನ್ನು ಅಡ್ಡವಾಗಿಟ್ಟು ಇತರ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿ ಅವಾಂತರ ಸೃಷ್ಟಿಸಿದ ಘಟನೆ ಗುರುವಾರ ನಡೆಯಿತು.
ಕಾರಿನಲ್ಲಿ ಪ್ರವಾಸ ಬಂದಿದ್ದ ಬಾದಾಮಿ ಮೂಲದ ಪ್ರವೀಣ ಹಾಗೂ ಕೃಷ್ಣ ಎಂಬ ಇಬ್ಬರು ಯುವಕರು ಅಮಲು ಪದಾರ್ಥ ಸೇವಿಸಿ ಕಾರನ್ನು ಚಲಾಯಿಸುತ್ತಾ ಬಂದಿದ್ದು ಸೀಟು ಬಳಿ ಬರುವಾಗ ಅಮಲು ಇನ್ನಷ್ಟು ಹೆಚ್ಚಿದ ಕಾರಣ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿದ್ದರು.
ಈ ಬಗ್ಗೆ ಸ್ಥಳೀಯರಿಗೆ ಮಾಹಿತಿ ತಿಳಿದು ಒಟ್ಟಾಗುತ್ತಿದ್ದಂತೆ ಕೃಷ್ಣ ಎಂಬಾತ ಕಾರಿನ ಕೀ ಹಿಡಿದುಕೊಂಡು ಕಾಡಿನೊಳಗೆ ಓಡಿ ಹೋಗಿದ್ದ. ಸ್ಥಳೀಯರು ಕಾರನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟು ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದರು. ಟ್ರಾಫಿಕ್ ಪಿ.ಎಸ್.ಐ.ಓಡಿಯಪ್ಪ ಗೌಡ ಹಾಗೂ ಸಿಬ್ಬಂದಿ, ಹೆದ್ದಾರಿ ಗಸ್ತು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಅಮಲಿನಲ್ಲಿದ್ದ ಪ್ರವೀಣ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದು ವಿಚಾರ ನಿಗೂಢವಾಗಿ ಮುಂದುವರಿಯಿತು.
ಮಧ್ಯಾಹ್ನದ ಹೊತ್ತಿಗೆ ಅಮಲು ಒಂದಿಷ್ಟು ಇಳಿಯುತ್ತಿದ್ದಂತೆ ಕಾಡಿನ ಒಳಭಾಗದಲ್ಲಿದ್ದ ಕೃಷ್ಣ ಹೊರಗೆ ಬರುತ್ತಿದ್ದಂತೆ, ಸ್ಥಳೀಯರು ಇವರನ್ನು ಬೆಳ್ತಂಗಡಿ ಟ್ರಾಫಿಕ್ ಠಾಣೆಗೆ ಕಳುಹಿಸಿಕೊಟ್ಟರು.