ಮಂಗಳೂರು: ಕೆಲ ದಿನಗಳ ಹಿಂದೆ ನಗರದ ಗುಜ್ಜರಕೆರೆ ಬಳಿ ನಡೆದಿದ್ದ ಹಾಸ್ಟೆಲ್ ವಿದ್ಯಾರ್ಥಿಗಳ ಹೊಡೆದಾಟ, ಕೊಲೆಯತ್ನ ಪ್ರಕರಣದಲ್ಲಿ ಬಂಧಿತರಾಗಿದ್ದ ಮೂವರು ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ಲಭಿಸಿದೆ.
ಡಿ.2ರಂದು ಗುಜ್ಜರಕೆರೆ ಬಳಿಯಿರುವ ಖಾಸಗಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿತ್ತು. ಈ ಸಂದರ್ಭ ಪೊಲೀಸರು ಎರಡೂ ವಿದ್ಯಾರ್ಥಿಗಳ ಗುಂಪಿನ ಮೇಲೆ ಕೊಲೆಯತ್ನ ಪ್ರಕರಣ ದಾಖಲಿಸಿ ಒಂಭತ್ತು ಮಂದಿಯನ್ನು ಬಂಧಿಸಿದ್ದು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ವಿದ್ಯಾರ್ಥಿಗಳಾದ ಕೆನ್ ಜಾನ್ಸನ್, ಮುಹಮ್ಮದ್ ಸಿ. ಮತ್ತು ಶಾಹಿದ್ ಎಂಬವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನುವ ಪ್ರಕರಣ ಮತ್ತು ಸಾರ್ವಜನಿಕರ ಆಸ್ತಿ ಧ್ವಂಸ ಮಾಡಿದ್ದಾರೆ ಎನ್ನುವ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದೀಗ ಕೆನ್ ಜಾನ್ಸನ್, ಮುಹಮ್ಮದ್ ಸಿ. ಮತ್ತು ಅಬ್ದುಲ್ ಶಾಹಿದ್ ಗೆ ನ್ಯಾಯಾಲಯ ಜಾಮೀನು ನೀಡಿದ್ದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಇವರ ಪರವಾಗಿ ಯುವ ವಕೀಲರಾದ ಆಸಿಫ್ ಬೈಕಾಡಿ, ಮಹಮ್ಮದ್ ಅಸ್ಗರ್ ಮುಡಿಪು, ಇಜಾಝ್ ಅಹ್ಮದ್ ಉಳ್ಳಾಲ, ರಿತೇಶ್ ಬಂಗೇರ, ಮುಫೀದುರ್ರಹ್ಮಾನ್ ಮತ್ತು ಆಶಿಕಾ ವಾದ ಮಂಡಿಸಿದ್ದಾರೆ.