ಬೆಳ್ತಂಗಡಿ : ‘ನಮ್ಮೊಳಗಿನ ಸಂತೋಷ ನಾವು ಯಾವುದರ ಹಿಂದೆ ಹೋಗುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವುದೇ ಸಂಸ್ಥೆಯಲ್ಲಿ ಮಾಡುವ ಕೆಲಸವನ್ನು ಬದ್ಧತೆಯಿಂದ ಮಾಡಿದರೆ ಕೆಲಸ ಅಚ್ಚುಕಟ್ಟಾಗಿರುವ ಜೊತೆಗೆ ಸಂಸ್ಥೆಯು ಬೆಳೆಯುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.
ಅವರು ಶನಿವಾರ ಶ್ರೀ ಧರ್ಮಸ್ಥಳ ಗ್ರಾಮೋದ್ಯೋಗ ಸಂಸ್ಥೆ (ರಿ) ಇದರ ವತಿಯಿಂದ ನಡೆದ ಹೊಸ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
‘ನಾವು ನಿರ್ಮಲವಾದ ಮನಸ್ಸು ಬೆಳೆಸಿಕೊಳ್ಳಬೇಕು. ಕಷ್ಟಗಳು ಪ್ರತಿಯೊಬ್ಬರ ಬದುಕಲ್ಲೂ ಇದೆ. ಹೊಸ ವರ್ಷದ ಸಂದರ್ಭದಲ್ಲಿ ಹೊಸ ನಿರ್ಣಯ ಬದುಕಲ್ಲಿ ಹೊಂದಬೇಕು ಸಣ್ಣ ಸಣ್ಣ ಯೋಚನೆ ಸಣ್ಣ ಸಣ್ಣ ಬದಲಾವಣೆ ಸಂಸ್ಥೆಯ ವ್ಯವಸ್ಥೆಯನ್ನು ಬದಲಾಯಿಸಿಬಹುದು’ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಲೆಫ್ಟಿನೆಂಟ್ ಕರ್ನಲ್ ಮೂರ್ಜೆ ನರಸಿಂಹ ಪ್ರಭು ಮಾತನಾಡಿ, ‘ನಾವು ದುಡಿಯುವ ಪ್ರತಿಯೊಂದು ಕಡೆ ಸೇವಾ ಬದ್ಧತೆ ಅಗತ್ಯವಾದುದು. ಸಿರಿ ಸಂಸ್ಥೆಯಲ್ಲಿ ಗುಣಮಟ್ಟದ ಉತ್ಪನ್ನಗಳು ಉತ್ಪಾದನೆಯಾಗುತ್ತಿರುವುದರಿಂದ ಹೆಚ್ಚು ಜನ ಮನ್ನಣೆ ಪಡೆಯುತ್ತಿದೆ’ ಎಂದರು.
ಸಂಸ್ಥೆಯ ನಿರ್ದೇಶಕ ರಾಜೇಶ್ ಪೈ ಕಾರ್ಯಕ್ರಮ ಉದ್ಘಾಟಿಸಿದರು. ರುಡುಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಲ್ಲಾಪು ಇದ್ದರು. ಇದೇ ಸಂದರ್ಭದಲ್ಲಿ ಜನವರಿ ತಿಂಗಳಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವ ಸಿಬ್ಬಂದಿಗಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ವ್ಯವಸ್ಥಾಪಕ ನಿರ್ದೇಶಕ ಜನಾರ್ದನ ಕೆ. ಎನ್ ಪ್ರಸ್ತಾವಿಕವಾಗಿ ಮಾತನಾಡಿದರು. ಯೋಜನಾಧಿಕಾರಿ ಪ್ರಸನ್ನ ಸ್ವಾಗತಿಸಿದರು. ಮಾರುಕಟ್ಟೆ ಅಧಿಕಾರಿ ಜೀವನ್ ಮಾರುಕಟ್ಟೆ ಮತ್ತು ಲೆಕ್ಕಪತ್ರ ವಿಭಾಗದ ಮೇಲ್ವಿಚಾರಕಿ ವಸಂತಿ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ವಿನ್ಸೆಂಟ್ ಲೋಬೋ ವಂದಿಸಿದರು.