ಬೆಳ್ತಂಗಡಿ : ದಕ್ಷಿಣದ ಅಯೋಧ್ಯೆ ಎಂದು ಪ್ರಸಿದ್ಧವಾಗಿರುವ ಧರ್ಮಸ್ಥಳ ನಿತ್ಯಾನಂದ ನಗರದಲ್ಲಿನ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ನಲ್ಲಿ ಎ.3 ರಿಂದ ಎ.10 ರವರೆಗೆ 62ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ, ಕ್ಷೇತ್ರದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಕನ್ಯಾಡಿ ದೇವರಗುಡ್ಡೆ ಶ್ರೀಗುರುದೇವ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ತಿಳಿಸಿದರು.
ಅವರು ಶನಿವಾರ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ಕರೆದು ಏಳು ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಅಹೋರಾತ್ರಿ ನಡೆಯುವ ರಾಮನಾಮ ತಾರಕ ಮಂತ್ರ ಸಪ್ತಾಹದ ಅಖಂಡ ನಂದಾ ದೀಪವನ್ನು ಉಸ್ತುವಾರಿ ಸಚಿವ ವೀ.ಸುನಿಲ್ ಕುಮಾರ್ ಪ್ರಜ್ವಲಿಸಿ, ಜಾತ್ರೋತ್ಸವದ ಉದ್ಘಾಟನೆಯನ್ನು ನೆರವೇರಿಸುವರು.
ರಾಮ ನಾಮ ಮಂತ್ರೋಚ್ಛಾರಣೆಯನ್ನು ಸಂಸದ ನಳೀನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿ.ಪ.ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಾಜಿ ಶಾಸಕ ವಸಂತ ಬಂಗೇರ ಪ್ರಾರಂಭಿಸಲಿದ್ದಾರೆ ಎಂದರು.
ಎ.3 ರಂದು ಬೆಳಿಗ್ಗೆ ದೇವರ ಬಲಿ ಉತ್ಸವ, ಸಂಜೆ ಕುರೆಪಟ್ ತುಳು ಹಾಸ್ಯ ನಾಟಕ, 4 ರಂದು ಬೆಳಿಗ್ಗೆ ಶ್ರೀಗುರುದೇವ ಉತ್ಸವ ಮೂರ್ತಿಗಳ ಬಲಿಉತ್ಸವ, ಸಂಜೆ ಸಂಗೀತ ಗಾನ ಸಂಭ್ರಮ, 5 ರಂದು ಸಂಜೆ ರಜತ ಪಾಲಕಿ ಉತ್ಸವ, ಕೋಟಿ-ಚೆನ್ನಯ ತುಳು ಯಕ್ಷಗಾನ, 6 ರಂದು ಸಂಜೆ ಪುಷ್ಪ ರಥೋತ್ಸವ ಬಳಿಕ ಶಿವದೂತೆ ಗುಳಿಗೆ , 7 ರಂದು ಸಂಜೆ ಚಂದ್ರಮಂಡಲ ಉತ್ಸವ, ನೃತ್ಯ ಸಿಂಚನ, 8 ರಂದು ಸಂಜೆ ಬೆಳ್ಳಿ ರಥೋತ್ಸವ, ಗೀತಾ-ಸಾಹಿತ್ಯ-ಸಂಭ್ರಮ, 9 ರಂದು ಸಂಜೆ ಶ್ರೀ ಹನುಮಾನ್ ರಥೋತ್ಸವ, ಕಟ್ಟೆ ಪೂಜೆ, ಕೆರೆ ದೀಪೋತ್ಸವ, ಮಸ್ತ್ ಮ್ಯಾಜಿಕ್, 10 ರಂದು ಬೆಳಿಗ್ಗೆ ತಾರಕ ಮಂತ್ರ ಯಜ್ಞ ಮಂಗಳ, ಅಪರಾಹ್ನ ಚಂದ್ರಾವಳಿ ವಿಲಾಸ ಹಾಸ್ಯ ಯಕ್ಷಗಾನ, ಸಂಜೆ ಮಹಾ ಬ್ರಹ್ಮರಥೋತ್ಸವ, ನೇಮೋತ್ಸವ, 12 ರಂದು ಶ್ರೀ ದೇವಲಿಂಗೇಶ್ವರ ದೇವಸ್ಥಾನದ ಮಹೋತ್ಸವ, ವಿವಿಧ ದೈವಗಳ ನೇಮೋತ್ಸವ ನಡೆಯಲಿದೆ ಎಂದರು.
ಶಾಸಕ ಹರೀಶ ಪೂಂಜ ಮಾತನಾಡಿ ಜಾತ್ರೆಗೆ ಈ ಬಾರಿ ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ಸವದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಏಳು ದಿನಗಳ ಕಾಲ ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು ಸರ್ವರ ಸಹಕಾರ ಕೋರಿದರು.
ಶ್ರೀ ರಾಮಕ್ಷೇತ್ರ ಸೇವಾ ಸಮಿತಿ ಪ್ರಧಾನ ಸಂಚಾಲಕ ಜಯಂತ್ ಕೋಟ್ಯಾನ್, ಅಧ್ಯಕ್ಷ ಸದಾನಂದ ಉಂಗಿಲ ಬೈಲು, ಟ್ರಸ್ಟಿಗಳಾದ ತುಕಾರಾಮ, ಕೃಷ್ಣಪ್ಪ ಗುಡಿಗಾರ್, ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಉಪಸ್ಥಿತರಿದ್ದರು.