ಚೆನ್ನೈ : ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಪ್ರವಾಸ ಕುರಿತು ಸುಳ್ಳು ಹಾಗೂ ಮಾನಹಾನಿಕಾರಕ ಹೇಳಿಕೆಗಳನ್ನು ನೀಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ವಿರುದ್ಧ ಡಿಎಂಕೆ ಪಕ್ಷವು ಶನಿವಾರ ನೋಟಿಸ್ ಜಾರಿ ಮಾಡಿದೆ.
ಡಿಎಂಕೆಯ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ನೋಟಿಸ್ ಜಾರಿ ಮಾಡಿದ್ದು, ‘ಅಣ್ಣಾಮಲೈ ಅವರು ತಾವು ನೀಡಿರುವ ಹೇಳಿಕೆಗಳನ್ನು ವಾಪಸ್ ಪಡೆದು 24 ಗಂಟೆಗಳ ಒಳಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಮತ್ತು ಎರಡು ದಿನಗಳೊಳಗಾಗಿ ಮುಖ್ಯಮಂತ್ರಿ ಅವರ ಸಾರ್ವಜನಿಕ ಪರಿಹಾರ ನಿಧಿಗೆ ₹ 100 ಕೋಟಿ ಪಾವತಿಸುವಂತೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು’ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
‘ದುಬೈ ಎಕ್ಸ್ಪೋ 2020’ರಲ್ಲಿ ಭಾಗವಹಿಸಲು ಮತ್ತು ತಮಿಳುನಾಡಿನಲ್ಲಿ ಹೂಡಿಕೆ ಮಾಡಲು ಗಲ್ಫ್ ರಾಷ್ಟ್ರದ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸುವ ಸಲುವಾಗಿ ಸ್ಟಾಲಿನ್ ಅವರು ಪ್ರಸ್ತುತ ಯುಇಎ ಪ್ರವಾಸದಲ್ಲಿದ್ದಾರೆ.
ಮಾರ್ಚ್ 24 ಮತ್ತು 25ರಂದು ಬಿಜೆಪಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಅಣ್ಣಾಮಲೈ ಅವರು, ಸ್ಟಾಲಿನ್ ಅವರ ಯುಎಇ ಭೇಟಿಗೆ ವೈಯಕ್ತಿಕ ಉದ್ದೇಶಗಳು ಕಾರಣವೆಂದು ಆರೋಪ ಮಾಡಿದ್ದರು.