ಬಂಟ್ವಾಳ : ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ಶಾಸಕ ರಾಜೇಶ್ ನಾಕ್ ರವರು ರೈತರನ್ನು ದಂಧೆಕೋರರು ಎಂಬ ಪದ ಬಳಕೆ ಮಾಡುವ ಮೂಲಕ ರೈತರನ್ನು ಅವಮಾನಿಸಿದ್ದು, ಇದನ್ನು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ, ಬಂಟ್ವಾಳ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಎರಡೂ ಬ್ಲಾಕ್ನ ಕಿಸಾನ್ ಘಟಕವು ಖಂಡಿಸುತ್ತದೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಅವರು ಎಚ್ಚರಿಸಿದ್ದಾರೆ.ಶುಕ್ರವಾರ ಬಿ.ಸಿ.ರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೆಹಲಿಯಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೇಂದ್ರ ಸರಕಾರ ಯಾವುದೇ ಸ್ಪಂದನೆ ನೀಡಿಲ್ಲ ಎಂದು ಟೀಕಿಸಿದ ಅವರು ರೈತರ ಹಿತ ಕಾಪಾಡಲು ಕಾಂಗ್ರೆಸ್ ಸರಕಾರ ಮಾತ್ರ ಬದ್ದವಾಗಿದೆ ಎಂದರು.
ಅದಾನಿ ಕಂಪೆನಿಯ ಹೈ ಪವರ್ ವಿದ್ಯುತ್ ಲೈನ್ ಸಂಪರ್ಕ ಬಂಟ್ವಾಳ ತಾಲೂಕಿನ ಕೃಷಿ ಭೂಮಿಯ ಮೇಲೆ ಹಾದುಹೋದರೆ ಅನೇಕ ಕೃಷಿಕರ ಜೀವನ ನರಕವಾಗಲಿದ್ದು, ಈ ಬಗ್ಗೆ ಬಂಟ್ವಾಳ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು, ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಅಗತ್ಯ ಬಿದ್ದರೆ ಕೇರಳ ಸರಕಾರ ವಿರುದ್ಧವು ಹೋರಾಟಕ್ಕೆ ಸಿದ್ದ ಎಂದರು. ಬಂಟ್ವಾಳ ತಾಲೂಕಿನ ೬ ಗ್ರಾಮಗಳಲ್ಲಿ ವಿದ್ಯುತ್ ಹೈಟೆನ್ಶೆನ್ ತಂತಿ ಹಾದುಹೋಗಲಿದ್ದು, ಈಗಾಗಲೇ ಸಮಾನ ಮನಸ್ಕ ಸಂಘಟನೆ ಹಾಗೂ ರೈತರ ಜೊತೆ ಸೇರಿ ಕಾಂಗ್ರೆಸ್ ಕಿಸಾನ್ ಘಟಕವು ಪ್ರತಿಭಟನೆಯಲ್ಲಿ ಭಾಗಿಯಾಗಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ ಅವರ ಮಾರ್ಗದರ್ಶನದಲ್ಲಿ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಾಗುವುದಲ್ಲದೆ ನ್ಯಾಯಾಲಯದ ಮೊರೆ ಹೋಗಲು ಯೋಚಿಸಲಾಗುವುದು ಎಂದ ಅವರು ಕೃಷಿಕ ಶಾಸಕ ಎಂದು ಹೇಳಿಕೊಳ್ಳುವ ಶಾಸಕ ರಾಜೇಶ್ ನಾಯ್ಕ್ ಈ ವಿಚಾರದಲ್ಲಿ ಮತ್ತು ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ವಿರೋಧ ಮಾಡಿ ನಮ್ಮ ಜೊತೆ ಹೋರಾಟದಲ್ಲಿ ಭಾಗಿಯಾಗಬೇಕು ಎಂದು ಸವಾಲೆಸೆದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಿಸಾನ್ ಘಟಕದ ಪ್ರಮುಖರಾದ ಸದಾನಂದ ಶೆಟ್ಟಿ, ಸೋಮೇಶೇಖರ್ ಗೌಡ, ಪುಸರಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್,ವೆಂಕಪ್ಪ ಪೂಜಾರಿ ಬಂಟ್ವಾಳ ಉಪಸ್ಥಿತರಿದ್ದರು.