ಬಂಟ್ವಾಳ : ಗ್ರಾಮಪಂಚಾಯತ್ ಗಳು, ಕಂದಾಯ ಇಲಾಖೆ ಸಹಿತ ಗ್ರಾಮಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕೋವಿಡ್ ನಿರ್ಮೂಲನೆಗೆ ತೊಡಗಿಸಿಕೊಳ್ಳಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಸೂಚಿಸಿದ್ದಾರೆ.
ಬಂಟ್ವಾಳ ತಾಲೂಕು ಪಂಚಾಯತ್ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ಮಂಗಳವಾರ ಬಂಟ್ವಾಳ ತಾಲೂಕು ಮಟ್ಟದ ಕೋವಿಡ್ -19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಈ ನಿರ್ದೇಶನ ನೀಡಿದ್ದಾರೆ.
ಕೋವಿಡ್ ಪ್ರಕರಣ ಹೆಚ್ಚಿರುವ ಕಡೆ ಹೆಚ್ಚಾಗಿ ಹೋಮ್ ಐಸೋಲೇಶನ್ ಒಳಗಾಗುವುದರಿಂದ ಸಮಸ್ಯೆಯಾಗುತ್ತಿದ್ದು, ಫಾಸಿಟಿವ್ ಧೃಢಪಟ್ಟವರನ್ನು ಅಧಿಕಾರಿಗಳು ಮನವೊಲಿಸಿ ಕೊರೋನಾ ಕೇರ್ ಸೆಂಟರ್ ಗೆ ದಾಖಲಿಸಲು ಮೊದಲಆದ್ಯತೆ ನೀಡುವಂತೆ ಸಚಿವ ಅಂಗಾರ ಅವರು ಸಲಹೆ ನೀಡಿದರು.
ಸರಕಾರ,ಹಿರಿಯ ಅಧಿಕಾರಿಗಳು ಮಾಡುವ ಆದೇಶವನ್ನು ತಾಲೂಕು ಮಟ್ಟದ ಅಧಿಕಾರಿಗಳು ಅನುಷ್ಠಾನಕ್ಕೆ ತರುವಲ್ಲಿ ಹೆಚ್ಚು ಒತ್ತು ನೀಡುವುದರ ಜೊತೆಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಸಚಿವರು ಸೂಚಿಸಿದರು.
ಕೇರ್ ಸೆಂಟರ್ ನ್ನು ಸುಸಜ್ಜಿತಗೊಳಿಸಿ:
ಕೋವಿಡ್ ಕೇರ್ ಸೆಂಟರ್ ನಲ್ಲಿ ಟಿ.ವಿ.,ಪತ್ರಿಕೆ ಸಹಿತ ವಿವಿಧ ಸೌಲಭ್ಯದೊಂದಿಗೆ ಸುಸಜ್ಜಿತಗೊಳಿಸಿದರೆ ಸೋಂಕಿತರು ಕೇರ್ ಸೆಂಟರ್ ಗೆ ದಾಖಲಾಗುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ತಹಶೀಲ್ದಾರ್ ,ತಾ.ಪಂ.ಇಒ ಅವರು ಗಮನ ಹರಿಸುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಸೂಚಿಸಿದರು.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದರು.
ಕೋವಿಡ್ ನಿಯಂತ್ರಣ ಕೆಲಸ ಕೇವಲ ಆರೋಗ್ಯ ಇಲಾಖೆಗೆ ಮಾತ್ರ ಸೀಮಿತ ಅಲ್ಲ ಪಿಡಿಒ, ವಿ.ಎ.ಬೀಟ್ ಪೊಲೀಸ್ ರವರ ಸಹಿತ ಗ್ರಾಮಮಟ್ಟದ ಎಲ್ಲಾ ಅಧಿಕಾರಿಗಳು ಮುತುವರ್ಯ್ಜಿಯಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಈ ಸಂದರ್ಭ ಆದೇಶಿಸಿದರು.
ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಳ್ಳಬೇಕು, ಕೋವಿಡ್ ಸೋಂಕಿತರನ್ನು ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ನೀಡಬೇಕೆನ್ನುವುದು ಸರಕಾರದ ಸೂಚನೆಯಿದ್ದು,ಈಗಿದ್ದರೂ ಹೋಂ ಐಸೋಲೇಶನ್ ಗೆ ಒಳಗಾಗಿದ್ದವರನ್ನುತಕ್ಷಣ ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಬೇಕು ಒಪ್ಪದಿದ್ದಲ್ಲಿ ಮನೆಯನ್ನು ಸೀಲ್ಡೌನ್ ನಂತಹ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.