ಬೆಳ್ತಂಗಡಿ; ವಕ್ಫ್ ಆಸ್ತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಈಗಾಗಲೇ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ಕೇಂದ್ರ ವಕ್ಫ್ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರ ಜೊತೆ ಮಾತನಾಡಿ 500 ಕೋಟಿ ರೂ.ಅನುದಾನ ಬೇಡಿಕೆ ಇಟ್ಟಿದ್ದಾರೆ, ರಾಜ್ಯದ ಮುಖ್ಯಮಂತ್ರಿಗಳ ಜೊತೆ ನಾನೂ 200 ಕೋಟಿ ರೂ. ಬೇಡಿಕೆ ಇರಿಸಿದ್ದು, ಈ ಹಿಂದೆ ಕೇವಲ 100 ಕೋಟಿ ರೂ.ಮಾತ್ರ ಅನುದಾನ ದೊರೆಯುತ್ತಿದ್ದಲ್ಲಿಗೆ ಈ ಬಾರಿ 700 ಕೋಟಿ ರೂ. ಅನುದಾನದ ಭರವಸೆ ಲಭಿಸಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ.ಎಮ್ ಶಾಫಿ ಸಅದಿ ಹೇಳಿದರು.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾದ ಬಳಿಕ ಸೋಮವಾರ ಮಂಗಳೂರಿಗೆ ಮೊದಲ ಬಾರಿ ಆಗಮಿಸಿದ ಅವರು ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಕಾಜೂರು ದರ್ಗಾಶರೀಫ್ಗೆ ಪ್ರಥಮ ಭೇಟಿ ನೀಡಿ ಸಮಿತಿಯವರ ಗೌರವ ಸ್ವೀಕರಿಸಿ ಮಾತನಾಡಿದರು.
ಕೇಂದ್ರ ಸರಕಾರದ ಮಹತ್ವಪೂರ್ಣ ವಾದ ಹೊಸ ಯೋಜನೆಯಾದ ಪ್ರವಾಸಿ ತಾಣಗಳಾಗಿರುವ ಧಾರ್ಮಿಕ ಕೇಂದ್ರಗಳನ್ನು ಆಕರ್ಷಣೀಯಗೊಳಿಸಲು ಉದ್ಯಾನವನ ನಿರ್ಮಿಸುವರೇ ಅನುದಾನದ ಅವಕಾಶ ಇದ್ದು ಆ ಪಟ್ಟಿಯಲ್ಲಿ ಈಗಾಗಲೇ ಕಾಜೂರಿನ ಹೆಸರನ್ನು ನಮೂದಿಸಿ ಕೇಂದ್ರಕ್ಕೆ ಕಳಿಸಲಾಗಿದೆ. ಸಧ್ಯದಲ್ಲೇ ಅನುದಾನ ಒದಗಿಬರಲಿದೆ. ಮುಂದಕ್ಕೆ ಇಲ್ಲಿ ಯಾತ್ರಿನಿವಾಸ, ಶಿಕ್ಷಣ ಸಂಸ್ಥೆಗಳ ಅಭಿವೃದ್ದಿ, ಉನ್ನತ ವಿದ್ಯಾಭ್ಯಾಸ ಕೇಂದ್ರ ಸ್ಥಾಪನೆ, ಉರೂಸ್ ಕಾರ್ಯಕ್ರಮಕ್ಕೆ ಅನುದಾನ ಇತ್ಯಾಧಿ ಚಟುವಟಿಕೆಗೆ ವಕ್ಫ್ ಮಂಡಳಿಯಿಂದ ಏನೆಲ್ಲಾ ಸಾಧ್ಯತೆಗಳು ಇವೆಯೋ ಅದೆಲ್ಲವನ್ನೂ ಒದಗಿಸಿಕೊಡಲು ಪ್ರಯತ್ನಪಡಲಾಗುವುದು.
ಕೇಂದ್ರದ ಯೋಜನೆಯೊಂದರಲ್ಲಿ ಈಗಾಗಲೇ ಜಿಲ್ಲೆಯ ಲೈನ್ ಮಸ್ಜಿದ್ ಗೆ 12 ಕೋಟಿ ರೂ., ಹಂಪನಕಟ್ಟೆ ಮಸ್ಜಿದ್ ಗೆ 14 ಕೋಟಿ ರೂ.ಹಾಗೂ ದಾರುಲ್ ಇರ್ಷಾದ್ ಸಂಸ್ಥೆಗೆ 5.50 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ಈಸಂದರ್ಭ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ರಿಯಾಝ್ ಖಾನ್, ಸದಸ್ಯ ಯಾಕೂಬ್ ಯೂಸುಫ್ ಹೊಸನಗರ ಉಪಸ್ಥಿತರಿದ್ದರು.
ತಾ. ಮುಸ್ಲಿಂ ಜಮಾಅತ್ ಪರವಾಗಿ ಎಸ್.ಎಂ ತಂಙಳ್ ಉಜಿರೆ, ಉಜಿರೆ ಬ್ಲಾಕ್ ಪರವಾಗಿ ಮುಹಮ್ಮದ್ ನೆರಿಯ, ಲಾಯಿಲ ಬ್ಲಾಕ್ ಪರವಾಗಿ ಆಲಿಕುಂಞಿ ಸಖಾಫಿ, ಕುವೆಟ್ಟು ಬ್ಲಾಕ್ ಪರವಾಗಿ ಅಬ್ದುಲ್ ಕರೀಂ ಗೇರುಕಟ್ಟೆ, ಆರ್ಡಿಸಿ ಪರವಾಗಿ ಮುಹಮ್ಮದ್ ಶರೀಫ್, ಎಸ್ಸೆಸ್ಸೆಫ್ ಕಾಜೂರು ಶಾಖೆ ಪರವಾಗಿ ಎಮ್.ಕೆ ಸಿರಾಜ್, ಎಸ್ವೈಎಸ್ ಪರವಾಗಿ ಕೆ.ಎಮ್ ಅಬೂಬಕ್ಕರ್ ಕುಕ್ಕಾವು, ಕಿಲ್ಲೂರು ಪರವಾಗಿ ಮುಹಮ್ಮದ್ ಪುತ್ತುಮೋಣು, ಅಬೂಬಕ್ಕರ್ ಮಲ್ಲಿಗೆ, ಗೌರವಾರ್ಪಣೆ ಸಲ್ಲಿಸಿದರು.
ಕಾಜೂರು ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ, ಪ್ರ.ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಕೋಶಾಧಿಕಾರಿ ಕಮಾಲ್ ಕಾಜೂರು, ಉಪಾಧ್ಯಕ್ಷ ಅಬ್ದುಲ್ ರಹಿಮಾನ್, ಸದಸ್ಯ ಕೆ.ಹೆಚ್ ಸಿದ್ದೀಕ್, ಮುಹಮ್ಮದ್ ಆಲಿ, ಬದ್ರುದ್ದೀನ್, ರಶೀದ್ ಬಲಿಪಾಯ, ಹಮೀದ್ ನೆಕ್ಕರೆ, ಅಶ್ರಫ್ ಆಲಿಕುಂಞಿ ಇವರು ಅಭಿನಂದನೆ ಸಲ್ಲಿಸಿದರು.
ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಾದಿಕ್ ಮಲೆಬೆಟ್ಟು, ಅಬ್ದುಲ್ ರಹಿಮಾನ್ ಮೊಗರ್ಪಣೆ, ಗ್ರಾ.ಪಂ ಸದಸ್ಯರಾದ ಶಾಹುಲ್ ಹಮೀದ್, ಕೆ.ಯು ಮುಹಮ್ಮದ್, ಜಬೀರ್ ಕಾಜೂರು ಮೊದಲಾದವರು ಉಪಸ್ಥಿತರಿದ್ದರು.