ಬೆಳ್ತಂಗಡಿ : ತಾಲೂಕಿನ ಮುಂಡಾಜೆಯ ಧುಂಬೆಟ್ಟು ಪರಿಸರದಲ್ಲಿ ಹಾದುಹೋಗಿರುವ 33ಕೆವಿ ಗುರುವಾಯನಕೆರೆ ಕಕ್ಕಿಂಜೆ ವಿದ್ಯುತ್ ಲೈನ್ ನಲ್ಲಿ ಹಾರಿದ ಬೆಂಕಿ ಕಿಡಿಗಳಿಂದ ಇಲ್ಲಿನ ಕಜೆ ಶ್ರೀಕೃಷ್ಣ ಭಟ್ ರವರ ರಬ್ಬರ್ ತೋಟದ ಪಕ್ಕದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಸ್ಥಳೀಯರ ಹಾಗೂ ಬೆಳ್ತಂಗಡಿ ಅಗ್ನಿಶಾಮಕ ದಳದ ಸಕಾಲಿಕ ಸ್ಪಂದನೆಯಿಂದ ಹೆಚ್ಚಿನ ಅನಾಹುತ ತಪ್ಪಿದೆ. ಬೆಂಕಿಯು ಪರಿಸರದಲ್ಲಿದ್ದ ಗಿಡಗಂಟಿಗಳು ಆವರಿಸಿ ಪಕ್ಕದ ರಬ್ಬರ್ ತೋಟದ ಪಸರಿಲು ಆರಂಭವಾಗುತ್ತಿದ್ದಂತೆ ಹತೋಟಿಗೆ ತರಲಾದ ಕಾರಣ ರಬ್ಬರ್ ಗಿಡಗಳಿಗೆ ಹೆಚ್ಚಿನ ಹಾನಿ ಉಂಟಾಗಿಲ್ಲ. ಬೆಂಕಿ ಆವರಿಸಿದ ಸಮೀಪವೇ ಒಂದು ಅಂಗಡಿ ಕೂಡ ಅದಕ್ಕೆ ಯಾವುದೇ ಹಾನಿ ಉಂಟಾಗಿಲ್ಲ.
ಗಿಡಗಂಟಿ ತೆರವಿಗೆ ಆಗ್ರಹ
ಈ ಲೈನ್ ನ ಟವರ್ ಗಳಿಗೆ ಭಾರಿ ಪ್ರಮಾಣದಲ್ಲಿ ಗಿಡಗಂಟಿಗಳು ಆವರಿಸಿವೆ. ಸದ್ಯ ಬೇಸಿಗೆ ಕಾಲ ಆರಂಭವಾಗಿರುವುದರಿಂದ ಇವು ಒಣಗುತ್ತಿದ್ದು ಬೆಂಕಿ ಅವಘಡಗಳಿಗೆ ಆಹ್ವಾನ ನೀಡುತ್ತಿವೆ, ಇವುಗಳನ್ನು ಕೂಡಲೇ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಉಜಿರೆ ಮೆಸ್ಕಾಂ ಉಪವಿಭಾಗದ ಕ್ಲೆಮೆಂಟ್ ಬೆಂಜಮಿನ್ ಬ್ರಾಗ್ಸ್ ಹಾಗೂ ಮುಂಡಾಜೆ ಶಾಖಾ ಕೇಂದ್ರದ ಜೆ.ಇ. ಶಂಕರ ಲಿಂಗೇಗೌಡ ತಕ್ಷಣ ಸ್ಪಂದನೆ ನೀಡಿ ಗುರುವಾರವೇ ಗಿಡಗಂಟಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.