ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಮೂಲಾರು ಸಮೀಪದಿಂದ ಶನಿವಾರ ನಾಪತ್ತೆಯಾಗಿದ್ದ ನವವಿವಾಹಿತೆಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಜರುಪಡಿಸಲಾಗಿದೆ.
ಇಲ್ಲಿನ ಶ್ರೀನಿವಾಸ ಎಂಬವರ ಪುತ್ರಿ ಹರ್ಷಿತಾ(23) ಶನಿವಾರ ಬೆಳಿಗ್ಗೆ ಯಿಂದ ನಾಪತ್ತೆಯಾಗಿದ್ದರು. ಕಳೆದ ಒಂದು ತಿಂಗಳ ಹಿಂದೆ ವಿವಾಹವಾಗಿದ್ದ ಈಕೆ ತವರುಮನೆಗೆ ಬಂದಿದ್ದ ವೇಳೆ ಏಕಾಏಕಿ ಮನೆಯಿಂದ ನಾಪತ್ತೆಯಾಗಿದ್ದರು.
ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಾಗಿದ್ದು ಈಕೆ ಬೆಂಗಳೂರಿನಲ್ಲಿರುವ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರು ಅಲ್ಲಿಗೆ ತೆರಳಿ ಪತ್ತೆಹಚ್ಚಿ ಕರೆತಂದಿದ್ದಾರೆ.
ನಾಪತ್ತೆ ದಿನ ಸ್ಥಳೀಯರು ಪರಿಸರದಲ್ಲಿ ಸಾಕಷ್ಟು ಹುಡುಕಾಟ ನಡೆಸಿದ್ದರು.ಬಂಟ್ವಾಳ ಡಿ ವೈ ಎಸ್ ಪಿ ಪ್ರತಾಪ್ ಸಿಂಗ್ ಥೋರಟ್ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ವೃತ್ತನಿರೀಕ್ಷಕ ಶಿವಕುಮಾರ್ ಸೂಚನೆಯಂತೆ, ಧರ್ಮಸ್ಥಳದ ಪಿ ಎಸ್ ಐ ಕೃಷ್ಣಕಾಂತ ಪಾಟೀಲ್ ಅವರ ನಿರ್ದೇಶನದಲ್ಲಿ ಸಿಬ್ಬಂದಿಗಳಾದ ಬೆನ್ನಿಚ್ಚನ್, ರಾಹುಲ್ ಹಾಗೂ ರಾಧಾ ಪತ್ತೆ ಕಾರ್ಯದಲ್ಲಿ ಸಹಕರಿಸಿದ್ದರು.
ಮನನೊಂದು ಮನೆಯಿಂದ ತೆರಳಿರುವುದಾಗಿ ತಿಳಿಸಿರುವ ಈಕೆಯನ್ನು ಪ್ರಸ್ತುತ ಮಂಗಳೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.