ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಶನಿವಾರ ರಾತ್ರಿ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ಸ್ಥಳೀಯರ ಕೃಷಿ ತೋಟಗಳಲ್ಲಿ ಅಡಕೆ, ತೆಂಗು ಹಾಗೂ ಬಾಳೆ ಗಿಡಗಳಿಗೆ ಹೆಚ್ಚಿನ ಹಾನಿ ಉಂಟು ಮಾಡಿವೆ.
ಇಲ್ಲಿನ ಜನವಸತಿ ಪ್ರದೇಶದ ಸಮೀಪದ ತೋಟಗಳಿಗೆ ಲಗ್ಗೆ ಇಟ್ಟ ಆನೆಗಳ ಹಿಂಡು ಪರಿಸರದ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ.
ಮೇ 13ರಂದು ಚಾರ್ಮಾಡಿಯ ಮಠದ ಮಜಲು ಪ್ರದೇಶದಲ್ಲಿ 4ರಿಂದ 5 ಕಾಡಾನೆಗಳು ಕೃಷಿ ಹಾನಿ ಉಂಟು ಮಾಡಿದ್ದವು. ಮುಂಡಾಜೆಯಲ್ಲಿ ಇದೇ ಆನೆಗಳ ಹಿಂಡು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಕಳೆದ ಮೂರು ತಿಂಗಳ ಹಿಂದೆ ದುಂಬೆಟ್ಟು ಪರಿಸರದಲ್ಲಿ ಸುಮಾರು ಮೂರು ವಾರ ಕಾಲ ನಿರಂತರ ದಾಳಿ ನಡೆಸಿದ ಕಾಡಾನೆಗಳು ಇಲ್ಲಿನ ಕೃಷಿಕರ ನಿದ್ದೆಗೆಡಿಸಿದ್ದವು. ಬಳಿಕ ಅರಣ್ಯ ಇಲಾಖೆಯು ನಾಗರಹೊಳೆಯಿಂದ ಕಾಡಾನೆಗಳನ್ನು ಕಾಡಿಗಟ್ಟುವ ಪರಿಣಿತರನ್ನು ಕರೆಯಿಸಿ ಪರಿಶೀಲನೆ ನಡೆಸಿತ್ತು.
ಆದರೆ ಪರಿಣಿತರು ಸುಮಾರು ಒಂದು ವಾರ ಕಾಲ ಕಾರ್ಯಾಚರಣೆ ನಡೆಸಿದರು ಕಾಡಾನೆಗಳು ಪತ್ತೆಯಾಗದೆ ಬರಿಗೈಯಲ್ಲಿ ವಾಪಸಾಗಿದ್ದರು.ದುಂಬೆಟ್ಟು ಪ್ರದೇಶವು ಆನೆ ದಾಳಿ ಪೀಡಿತ ಪರಿಸರ ವಾಗಿದ್ದು ಇಲ್ಲಿ ಆಗಾಗ ಆನೆಗಳು ದಾಳಿ ನಡೆಸಿ ಹಾನಿ ಉಂಟು ಮಾಡುತ್ತಿವೆ.
ಗಸ್ತು ವ್ಯವಸ್ಥೆ
ಶನಿವಾರದ ಆನೆ ದಾಳಿ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತರಲಾಗಿದೆ.ಪರಿಸರದ ಜನರ ಸಹಕಾರದಲ್ಲಿ ಇಲಾಖೆವತಿಯಿಂದ ವ್ಯವಸ್ಥೆಗೆ ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.