ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಮಾಡಿಕೊಳ್ಳಬೇಕಾದ ಅಗತ್ಯ ಸಿದ್ಧತೆಗಳ ಕುರಿತಂತೆ ಶಾಸಕ ಎಸ್.ಎ.ರಾಮದಾಸ್ ಅವರು ಸಂಘ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು.
ಭಾನುವಾರ ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಸಂಘ ಸಂಸ್ಥೆಗಳೊಡನೆ ಚರ್ಚೆ ನಡೆಸಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು ಒಂದು ಕಡೆ ಪ್ರಧಾನಿ ನರೇಂದ್ರ ಮೋದಿಯವರು ಮೈಸೂರಿಗೆ ಯೋಗ ದಿನದಂದು ಬರುತ್ತಿದ್ದಾರೆ ಇದು ಸಂತೋಷದ ವಿಷಯವಾದರೂ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿಯಿದೆ ಎಂದರು.
ಮೈಸೂರಿಗೆ ಬಹಳ ಪ್ರೀತಿಯಿಂದ ಮೋದಿಯವರು ಬರುತ್ತಿರುವ ಸಂದರ್ಭದಲ್ಲಿ ನಾನೇನು ಮಾಡಬಹುದು ಎಂದು ಯೋಚಿಸಬೇಕು. ಮೈಸೂರಿನಿಂದ ನಾವು ಪ್ರಪಂಚಕ್ಕೆ ಯಾವ ರೀತಿ ಸಂದೇಶ ನೀಡಬೇಕು ಎಂದು ಯೋಚಿಸಬೇಕಿದೆ. ಮನೆಗೆ ಯಾರಾದರೂ ಅತಿಥಿ ಬರುತ್ತಾರೆ ಎಂದರೆ ನಾವು ಹೇಗೆ ಮನೆಯಲ್ಲಿ ತಯಾರಿ ನಡೆಸುತ್ತೇವೆಯೋ ಅದೇ ರೀತಿ ಯೋಗ ದಿನಕ್ಕೋಸ್ಕರವಾಗಿ ನಾವು ಆ ರೀತಿ ತಯಾರಾಗಬೇಕಿದೆ ಎಂದು ಹೇಳಿದರು.
ಸಣ್ಣ ಮಕ್ಕಳಿಂದ ಹಿರಿಯರ ವರೆಗೆ ಮತ್ತು ಯೋಗದಿಂದ ಲಾಭವನ್ನು ಪಡೆಯುತ್ತಿರುವವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ನಾವೆಲ್ಲರೂ ಕಾರ್ಯವನ್ನು ರೂಪಿಸೋಣ. ನಿರಂತರವಾಗಿ ಮೈಸೂರಿನಲ್ಲಿ ಯೋಗವನ್ನು ಬೆಳೆಸಿಕೊಂಡು ಬರುತ್ತಾ ಇರುವವರಿಗೆ ಈ ಯಶಸ್ಸು ಸೇರಬೇಕು. ಯೋಗವನ್ನು ನಾವು ಕಲಿತು ಬೇರೆಯವರಿಗೆ ಕಲಿಸೋಣ, ಯೋಗ ಎಲ್ಲವನ್ನೂ ಮೀರಿದ್ದು. ಪ್ರಧಾನಿ ಮೋದಿಯವರು ಮೈಸೂರಿನಲ್ಲಿ ಇನ್ನೂ ಸ್ಥಳವನ್ನು ನಿಗದಿ ಮಾಡಿಲ್ಲ, ನಮ್ಮ ಮೈಸೂರಿನ ಯೋಗ ಅರಮನೆಯಿಂದ ಚಾಮುಂಡಿಗೆ ಅಂದರೆ ಚಾಮುಂಡಿ ಬೆಟ್ಟದಿಂದ ಅರಮನೆಯವರೆಗೂ ಸಹ ಯೋಗವನ್ನು ಮಾಡುವ ಒಂದು ಕಲ್ಪನೆಯನ್ನಿಟ್ಟುಕೊಂಡಿದ್ದೇವೆ. ಜೂನ್ 21 ರಂದು ಮೈಸೂರಿನಲ್ಲಿ ನಡೆಯುವ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿಸೋಣ, ನಾವೆಲ್ಲಾ ಇದರಲ್ಲಿ ಕೈಲಾದ ಅಳಿಲು ಸೇವೆಯನ್ನು ಮಾಡೋಣ ಎಂದು ನೆರೆದ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ತಿಳಿಸಿದರಲ್ಲದೆ ಅವರ ಸಹಕಾರವನ್ನು ಇದೇ ಸಂದರ್ಭ ಕೋರಿದರು.
ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ.ಕೃಷ್ಣಯ್ಯ, ಪತಂಜಲಿ ಯೋಗ ಕೇಂದ್ರದ ಸತ್ಯನಾರಾಯಣ, ಆಯುಷ್ ಇಲಾಖೆಯ ಉಪ ನಿರ್ದೇಶಕರಾದ ಸೀತಾಲಕ್ಷ್ಮಿ, ಜಿ.ಎಸ್.ಎಸ್ ಸಂಸ್ಥೆಯ ಶ್ರೀ ಹರಿ ಇನ್ನಿತರ ಪ್ರಮುಖರು ಹಾಜರಿದ್ದರು.