ಬೆಳ್ತಂಗಡಿ: 2021-22 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ತಾಲೂಕಿನ ಕಾಯರ್ತಡ್ಕ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದ ಕಡು ಬಡತನದ ಗ್ರಾಮೀಣ ಬಾಲಕಿ ಅನನ್ಯಾ 624 ಅಂಕ ಗಳಿಸಿ ಸರಕಾರಿ ಕನ್ನಡ ಮಾಧ್ಯಮ ವಿಭಾಗದಲ್ಲಿ ತಾಕೂಕಿಗೆ ಪ್ರಥಮ ಸ್ಥಾನಿಯಾಗಿ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಕಾಯರ್ತಡ್ಕ ಗಾಳಿತೋಟ ಎಂಬಲ್ಲಿನ ಬಡಕುಟುಂಬದ ಶಾಲಿನಿ ಅವರ ಪುತ್ರಿಯಾಗಿರುವ ಅನನ್ಯಾ ಅವರು ಬದುಕಿನ ಜಂಜಾಟಗಳ ನಡುವೆಯೂ ತಮಗಿದ್ದ ಸೀಮಿತ ಅವಕಾಶವನ್ನು ಬಳಸಿ ನಿಷ್ಟೆಯಿಂದ ಅಭ್ಯಾಸಮಾಡಿ ಸರಕಾರಿ ಕನ್ನಡ ಮಾದ್ಯಮ ಶಾಲಯಲ್ಲೇ ಗಮನಸೆಳೆಯಬಹುದಾದ ಸಾಧನೆ ದಾಖಲಿಸಿದ್ದಾರೆ.
ಜೆಸಿಐ ಕೊಕ್ಕಡ ಕಪಿಲಾ ದಿಂದ ಸನ್ಮಾನ: ಭವಿಷ್ಯದ ಶಿಕ್ಷಣಕ್ಕೆ ಸಹಕಾರ ಭರವಸೆ
ವಿದ್ಯಾರ್ಥಿನಿ ಅನನ್ಯಾ ಅವರ ಸಾಧನೆಯನ್ನು ಗುರುತಿಸಿದ ಜೆಸಿಐ ಕೊಕ್ಕಡ ‘ಕಪಿಲಾ” ಇದರ ಪದಾಧಿಕಾರಿಗಳು ಅಧ್ಯಕ್ಷ ಶ್ರೀಧರ ರಾವ್ ಕಳೆಂಜ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಮನೆಗೇ ತೆರಳಿ ತಾಯಿ ಶಾಲಿನಿ, ಸಹೋದರ ಆಕಾಶ್ ವಿ.ಬಿ ಅವರ ಸಮ್ಮುಖದಲ್ಲಿ ಮೇ.20 ಸನ್ಮಾನಿಸಿ ಪ್ರೋತ್ಸಾಹಿಸಿದರು.
ಈಕೆಯು ಮುಂದಕ್ಕೆ ವಿಜ್ಞಾನ ವಿಭಾಗದಲ್ಲಿ ಪಿ.ಯು. ಸಿ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಇದಕ್ಕೆ ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆ ಉಚಿತ ಪ್ರವೇಶಾಸವಕಾಶ ಕಲ್ಪಿಸಿದೆ. ಆಕೆಯ ಎರಡು ವರ್ಷಗಳ ಶಿಕ್ಷಣಕ್ಕೆ ಪೂರಕವಾದ ಸಹಕಾರವನ್ನು ಜೇಸಿಐ ಕೊಕ್ಕಡ ಕಪಿಲಾ ಹಾಗೂ ದಾನಿಗಳ ನೆರವಿನಿಂದ ಭರಿಸುವುದಾಗಿ ಜೇಸಿಐ ಅಧ್ಯಕ್ಷ ಶ್ರೀಧರ್ ರಾವ್ ಅವರು ಭರವಸೆ ನೀಡಿದ್ದಾರೆ.
ಸಾಧಕಿಯನ್ನು ಸನ್ಮಾನಿಸುವ ಸಂದರ್ಭದಲ್ಲಿ ಜೋಸೆಫ್ ಪಿರೇರಾ, ಜಿತೇಶ್ ಎಲ್ ಪಿರೇರಾ, ಸಂತೋಷ ಜೈನ್, ಅಕ್ಷತ್ ರೈ, ಪಿ.ಟಿ. ಸೆಬಾಸ್ಟಿನ್, ಹರೀಶ್, ಜಾನ್ಸನ್, ಜೋಸೆಫ್ ಎ.ಜೆ., ನರಸಿಂಹ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.