ಬಂಟ್ವಾಳ : ಶಿವಮೊಗ್ಗದಲ್ಲಿ ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಅವರ ಹತ್ಯೆ ಖಂಡಿಸಿ ಬಿಸಿರೋಡಿನಲ್ಲಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡದ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಭಜರಂಗದಳ ಜಿಲ್ಲಾ ಸಂಚಾಲಕ ಭರತ್ ಕುಮ್ಡೆಲು ಮಾತನಾಡಿ , ಭಯೋತ್ಪಾದಕ ಸಂಘಟನೆಗಳನ್ನು ತಕ್ಷಣ ಬ್ಯಾನ್ ಮಾಡಬೇಕು, ಭಯೋತ್ಪಾದಕ ಕೃತ್ಯಗಳನ್ನು ಮಾಡುವವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಹತ್ಯೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಹಿಂದೂ ಸಂಘಟನೆ ಯ ಪ್ರಮುಖರಾದ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ, ಸಂಘಟನೆಯನ್ನು ಹತ್ತಿಕ್ಕುವ ಷಡ್ಯಂತ್ರಗಳು ನಡೆಯುತ್ತಿದೆ.ನಾವು ದೇಶ ದ್ರೋಹಿಗಳ ವಿರೋಧಿಗಳು, ಪಾತಕಿಗಳನ್ನು ಬಂಧಿಸಿ ಕಾನೂನು ಕ್ರಮ ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ. ಮುಳ್ಳನ್ನು ಮುಳ್ಳಿನಿಂದ ತೆಗೆಯುತ್ತೇವೆ ಎಂದು ಆಕ್ರೋಶ ಭರಿತ ಮಾತುಗಳನ್ನಾಡಿದರು.
ಇದೇ ವೇಳೆ ಕಾರ್ಯಕರ್ತರು ಹೆದ್ದಾರಿ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಲು ಮುಂದಾದ ಘಟನೆ ಕೂಡ ನಡೆಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಮಾಡದಂತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಕಾರ್ಯ ಕರ್ತರನ್ನು ರಸ್ತೆ ತಡೆ ನಡೆಸದಂತೆ ಮನವೊಲಿಸಿದರು.
ಸಹಸಂಚಾಲಕ ಗುರುರಾಜ್ ಬಂಟ್ವಾಳ, ಉಪಾಧ್ಯಕ್ಷ ಸುರೇಶ್ ಬೆಂಜನಪದವು , ಕಾರ್ಯದರ್ಶಿ ದೀಪಕ್ ಅಜೆಕಲ, ಸಂಚಾಲಕ ಶಿವಪ್ರಸಾದ್ ತುಂಬೆ, ಸಹಸಂಚಾಲಕ ಸಂತೋಷ್, ಪ್ರಮುಖರಾದ ಪ್ರಸಾದ್ ಬೆಂಜನಪದವು, ಪ್ರವೀಣ್ ಕುಂಟಾಲ್ ಪಲ್ಕೆ, ವಿನೀತ್ ತುಂಬೆ, ಪ್ರತೀಕ್ ಎರ್ಮಾಲ ಮತ್ತಿತರರು ಉಪಸ್ಥಿತರಿದ್ದರು.