ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದಲ್ಲಿ ಶಾಲಾ ಬಾಲಕನಿಗೆ ಕಣಜದ ಹುಳುಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಸಂಜೆ ಜರಗಿದೆ.
ಸ್ಥಳೀಯ ಶಾಲೆಯೊಂದರ ಎಂಟನೇ ತರಗತಿ ವಿದ್ಯಾರ್ಥಿ ಕೊಡಂಗೆ ನಿವಾಸಿ ಸಂಜೆ ಶಾಲೆ ಮುಗಿಸಿ ವಾಪಸಾಗುತ್ತಿದ್ದಾಗ ಏಕಾಏಕಿ ಕಣಜದ ಹುಳುಗಳು ದಾಳಿ ನಡೆಸಿವೆ.
ಈ ವೇಳೆ ಬಾಲಕ ಓಡ ತೊಡಗಿದ್ದು,ಇದನ್ನು ಗಮನಿಸಿದ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ಯತಿಂದ್ರ ಹಾಗೂ ಅರಣ್ಯ ರಕ್ಷಕ ಶರತ್ ಶೆಟ್ಟಿ ಬಾಲಕನಿಗೆ ಇನ್ನಷ್ಟು ಕಣಜದ ಹುಳುಗಳು ಕಚ್ಚದಂತೆ ಮುನ್ನೆಚ್ಚರಿಕೆ ವಹಿಸಿದರು.ಅರಣ್ಯ ಇಲಾಖೆ ಸಿಬ್ಬಂದಿಯ ಮೇಲು ಕಣಜದ ಹುಳುಗಳು ದಾಳಿ ನಡೆಸಿವೆ.
ಬಾಲಕನನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿರುವ ಕುರಿತು ವೈದ್ಯರು ತಿಳಿಸಿದ್ದಾರೆ.
ಗಿಡುಗ ಕಣಜದ ಹುಳುಗಳ ಗೂಡಿಗೆ ದಾಳಿ ನಡೆಸಿದ್ದು ಘಟನೆಗೆ ಕಾರಣವೆಂದು ತಿಳಿದುಬಂದಿದೆ.