ಬೆಳ್ತಂಗಡಿ : ವೀಕೆಂಡ್ ಕರ್ಫ್ಯೂ ತಾಲೂಕಿನಲ್ಲಿ ಬಹುತೇಕ ಯಶಸ್ವಿಯಾಗಿದೆ. ಬೆಳಗಿನ ಅವಧಿಯಲ್ಲಿ ಬೆಳ್ತಂಗಡಿ, ಉಜಿರೆ ಮುಂಡಾಜೆ, ಕಕ್ಕಿಂಜೆ ಗುರುವಾಯನಕೆರೆ, ಮಡಂತ್ಯಾರು, ಅಳದಂಗಡಿ, ವೇಣೂರು ಸೇರಿದಂತೆ ಪ್ರಮುಖ ಪೇಟೆಗಳಲ್ಲಿ ಒಂದಿಷ್ಟು ಜನ ಸಂದಣಿ ಕಂಡುಬಂತು.
11ಗಂಟೆ ಬಳಿಕ ಕಡಿಮೆಯಾಗಿ ಮಧ್ಯಾಹ್ನದ ನಂತರ ವಿರಳ ಸಂಖ್ಯೆಯ ಜನರು ಓಡಾಟ ನಡೆಸಿದರು. ಕೆಲವೆಡೆ ಮಧ್ಯಾಹ್ನದ ಬಳಿಕ ಪೋಲಿಸರು ಅಂಗಡಿಗಳನ್ನು ಬಂದ್ ಮಾಡುವುದು ಕಂಡು ಬಂತು. ಮಾರ್ಗಸೂಚಿಯ ಗೊಂದಲದಿಂದ ಅನುಮತಿ ನೀಡಿದ ಅಂಗಡಿಗಳ ಜತೆ ಕೆಲವು ಸ್ಥಳಗಳಲ್ಲಿ ಇತರ ಅಂಗಡಿಗಳು ಸ್ವಲ್ಪ ಸಮಯ ತೆರೆದಿದ್ದವು.
ತಾಲೂಕಿನ ಚಾರ್ಮಾಡಿ,ಉಜಿರೆ, ಬೆಳ್ತಂಗಡಿ ಮೊದಲಾದ ಕೆಲವು ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಗಳನ್ನು ನಿರ್ಮಿಸಿ ಕಾರಣ ಕೇಳಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಚಾರ್ಮಾಡಿ ಘಾಟಿ ಮೂಲಕ ಪ್ರವಾಸಿ ವಾಹನಗಳ ಸಂಚಾರ ಕಡಿಮೆ ಇತ್ತು. ಪ್ರಮುಖ ಪೇಟೆಗಳಲ್ಲಿ ಬಾಡಿಗೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶವಿರದ ಕಾರಣ ನಿತ್ಯ ಪೂಜೆಗಳು ಮಾತ್ರ ಜರಗಿದವು. ಹೋಟೆಲ್,ದಿನಸಿ ಅಂಗಡಿಗಳು ತೆರೆದಿದ್ದರು ಗ್ರಾಹಕರ ದಟ್ಟಣೆ ಇರಲಿಲ್ಲ.
ಧರ್ಮಸ್ಥಳ ಕೆಎಸ್ಸಾರ್ಟಿಸಿ ಡಿಪೋದಲ್ಲಿ 121ರೂಟ್ ಗಳಲ್ಲಿ ಪ್ರತಿದಿನ ಬಸ್ ಸಂಚಾರ ಇದ್ದು, ಪ್ರಯಾಣಿಕರಿಲ್ಲದ ಕಾರಣ ಶನಿವಾರ ಬೆರಳೆಣಿಕೆಯ ರೂಟ್ ಗಳಲ್ಲಿ ಮಾತ್ರ ಬಸ್ ಗಳು ಓಡಾಟ ನಡೆಸಿದವು. ಗ್ರಾಮೀಣ ಪ್ರದೇಶದ ಬಸ್ ಗಳು ಸಂಚರಿಸಲಿಲ್ಲ. ಇತರ ಡಿಪೋಗಳ ಹಾಲ್ಟ್ ಬಸ್ ಗಳು ಮರು ಸಂಚಾರ ನಡೆಸಿದವು, ಅಲ್ಲೂ ಪ್ರಯಾಣಿಕರ ಕೊರತೆ ಕಾಣುತ್ತಿತ್ತು. ಮಂಗಳೂರು- ಧರ್ಮಸ್ಥಳ ಮಧ್ಯೆ ಕೆಲವು ಟ್ರಿಪ್ ಮಾತ್ರ ಬಸ್ ಸಂಚಾರ ಇತ್ತು.