ಬೆಳ್ತಂಗಡಿ: ಗಾಯಗೊಂಡಿದ್ದ ಕಾಳಿಂಗಕ್ಕೆ ಚಿಕಿತ್ಸೆ ಮಾಡಿ ಕಾಡಿಗೆ ಬಿಟ್ಟ ವಿದ್ಯಮಾನ ಚಿಬಿದ್ರೆಯಲ್ಲಿ ನಡೆದಿದೆ. ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಬಿದ್ರೆ ಗ್ರಾಮದ ಗಾಂಧಿ ನಗರದ ಬಳಿ ರಬ್ಬರ್ ತೋಟವೊಂದರಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದ ಕಾಳಿಂಗ ಸರ್ಪ ಮಂಗಳವಾರ ಕಂಡು ಬಂದಿತ್ತು.
ಸುಮಾರು 12ಅಡಿ ಉದ್ದದ ಕಾಳಿಂಗ ಸರ್ಪ ಅಸ್ವಸ್ಥ ಸ್ಥಿತಿಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ವೇಳೆ ಪತ್ತೆಯಾಗಿದ್ದು,ಕೂಡಲೇ ಅರಣ್ಯ ಇಲಾಖೆ ಹಾಗೂ ತೋಟತ್ತಾಡಿಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಲಾಯಿತು. ಸ್ಥಳೀಯರ ಸಹಕಾರದಲ್ಲಿ ಕಾಳಿಂಗ ಸರ್ಪವನ್ನು ಹಿಡಿಯಲಾಯಿತು.
ಹೆಬ್ಬಾವಿನ ಜತೆ ಕಾದಾಟ ನಡೆಸಿ ಅದನ್ನು ನುಂಗಿದ್ದ ಕಾಳಿಂಗ ಸರ್ಪ ಅಸ್ವಸ್ಥ ಸ್ಥಿತಿಯನ್ನು ತಲುಪಲು ಕಾರಣವಾಗಿತ್ತು, ಬಳಿಕ ಅದನ್ನು ವಾಂತಿ ಮಾಡಿಸಲಾಗಿದೆ ಎಂದು ಸ್ನೇಕ್ ಅನಿಲ್ ತಿಳಿಸಿದ್ದಾರೆ.
ಸೆಣಸಾಟದ ವೇಳೆ ಮೈಮೇಲೆಯು ಗಾಯಗಳಾಗಿದ್ದ ಕಾರಣ ಕಾಳಿಂಗ ಸರ್ಪವನ್ನು ಚಾರ್ಮಾಡಿ ಪಶು ಆಸ್ಪತ್ರೆಗೆ ಒಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.ಈ ವೇಳೆ ಚೇತರಿಸಿಕೊಂಡ ಕಾಳಿಂಗ ಸರ್ಪದ ಆರೋಗ್ಯ ಪರಿಶೀಲಿಸಿ ಕಾಡಿಗೆ ಬಿಡಲಾಗಿದೆ