ಬೆಳ್ತಂಗಡಿ: ಮುಂಡಾಜೆ ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಕಾಪು ರಕ್ಷಿತಾರಣ್ಯದ ಸೀಟು- ಅಂಬಡ್ತ್ಯಾರು ಪ್ರದೇಶದಲ್ಲಿ ಮಂಗಳವಾರವು ಕಣಜದ ಹುಳಗಳ ದಾಳಿ ಮುಂದುವರಿದಿದೆ.
4 ಶಾಲಾ ಮಕ್ಕಳ ಸಹಿತ ಸುಮಾರು ಹತ್ತಕ್ಕಿಂತ ಅಧಿಕ ಮಂದಿಗೆ ಕಣಜದ ಹುಳುಗಳು ಕಚ್ಚಿವೆ. ಹೆಚ್ಚಿನವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸೋಮವಾರ ಸಂಜೆ ಕೊಡಂಗೆ ಪರಿಸರದ ಶಾಲಾ ಬಾಲಕನ ಮೇಲೆ ಅಪಾರ ಸಂಖ್ಯೆಯ ಕಣಜದ ಹುಳುಗಳು ದಾಳಿ ನಡೆಸಿ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣೆಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕಣಜದ ಹುಳುಗಳ ದಾಳಿಗೆ ಒಳಗಾಗಿದ್ದಾರೆ.
ಕಣಜದ ಹುಳಗಳು ರಸ್ತೆಬದಿಯ ಮರವೊಂದರಲ್ಲಿ ಗೂಡು ಕಟ್ಟಿದ್ದು ಇದಕ್ಕೆ ಗಿಡುಗ ಹಾನಿ ಉಂಟು ಮಾಡಿದ ಕಾರಣ ದಾಳಿ ಆರಂಭಗೊಂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದು ಹೊಗೆ ಹಾಕುವ ಮೂಲಕ ಕಣಜದ ಹುಳುಗಳನ್ನು ಓಡಿಸುವ ಪ್ರಯತ್ನ ನಡೆಸಿದ್ದಾರೆ.