ಬೆಳ್ತಂಗಡಿ: ಮುಂಡಾಜೆ ಗ್ರಾಮದ ಧುಂಬೆಟ್ಟು, ಮಜಲು, ಕಜೆ ಮೊದಲಾದ ಪರಿಸರಗಳಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ತನಕ ಜನನಿಬಿಡ ಪ್ರದೇಶ ಹಾಗೂ ಕೃಷಿ ತೋಟಗಳಲ್ಲಿ ತಿರುಗಾಟ ನಡೆಸಿದ ಎರಡು ಕಾಡಾನೆಗಳು ಕೃಷಿ ಹಾನಿ ಉಂಟು ಮಾಡುವ ಜತೆ ಜನರಲ್ಲಿ ಭೀತಿಯನ್ನು ಮೂಡಿಸಿವೆ.
ಭಾನುವಾರ ರಾತ್ರಿ 10ಗಂಟೆ ಸುಮಾರಿಗೆ ಧುಂಬೆಟ್ಟು ಪರಿಸರದಲ್ಲಿ ಸ್ಥಳೀಯರಿಗೆ ಆನೆಗಳು ಕಂಡುಬಂದವು.ತಕ್ಷಣ ಪಟಾಕಿ ಸಿಡಿಸಿ ಓಡಿಸಲು ಪ್ರಯತ್ನಿಸಲಾಯಿತು. ಇದಕ್ಕೆ ಜಗ್ಗದ ಕಾಡಾನೆಗಳು ಇಲ್ಲಿನ ಕಜೆ ಶ್ರೀಕೃಷ್ಣಭಟ್, ಧುಂಬೆಟ್ಟಿನ ಶಶಿಧರ್ ಖಾಡಿಲ್ಕಾರ್ ಸೇರಿದಂತೆ ಹಲವರ ತೋಟಗಳಿಗೆ ನುಗ್ಗಿ ಬಾಳೆಗಿಡ,ಅಡಕೆ, ತೆಂಗಿನ ಮರಗಳನ್ನು ಮುರಿದು ಹಾಕಿ ಕೃಷಿ ಹಾನಿ ಉಂಟು ಮಾಡಿದವು.
ಸೋಮವಾರ ಬೆಳಿಗ್ಗೆ 8ಗಂಟೆ ತನಕ ಈ ಪರಿಸರದಲ್ಲಿ ತಿರುಗಾಟ ನಡೆಸಿ ದಾಂಧಲೆ ಎಬ್ಬಿಸಿರುವ ಕಾಡಾನೆಗಳು ಬಳಿಕ ಸಮೀಪದ ಕಾಡಿನತ್ತ ಹೋಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾರ್ಗಿಲ್ ವನಕ್ಕೆ ಹಾನಿ
ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ನೆನಪಿನಲ್ಲಿ ಮುಂಡಾಜೆಯ ಸಚಿನ್ ಭಿಡೆ ಅವರು ನಿರ್ಮಿಸಿರುವ ಕಾರ್ಗಿಲ್ ವನಕ್ಕೆ ದಾಳಿಯಿಟ್ಟ ಕಾಡಾನೆಗಳು ಸುಮಾರು ಒಂದು ಲಕ್ಷ ರೂ. ಅಂದಾಜು ಮೌಲ್ಯದ ಸೊತ್ತುಗಳಿಗೆ ಹಾನಿ ಉಂಟು ಮಾಡಿ, ಕೆಲವು ಬೆಲೆಬಾಳುವ ಹಾಗೂ ಅಪರೂಪದ ಗಿಡಗಳನ್ನು ಮುರಿದು ಹಾಕಿವೆ. ಕಾರ್ಗಿಲ್ ವನದ ಸೋಲಾರ್ ಬೇಲಿ,ಗೇಟು ಇತ್ಯಾದಿಗಳನ್ನು ಕಾಡಾನೆಗಳು ಧ್ವಂಸಗೈದಿವೆ.
ಸ್ಥಳೀಯರ ಆಕ್ರೋಶ
ಈ ಪ್ರದೇಶದಲ್ಲಿ ಸತತ ಕಾಡಾನೆ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇದುವರೆಗೆ ಭೇಟಿ ನೀಡಿಲ್ಲ ಹಾಗೂ ಆನೆ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳದಿರುವ ಬಗ್ಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
2019ರಲ್ಲಿ ಭೀಕರ ಪ್ರವಾಹದಿಂದ ಈ ಪ್ರದೇಶದ ನಳೀಲು ಎಂಬಲ್ಲಿರುವ ಆನೆ ಕಂದಕ ಮುಚ್ಚಿಹೋಗಿದ್ದು ಇದರಿಂದ ಆನೆಗಳು ಧುಂಬೆಟ್ಟು ಪರಿಸರಕ್ಕೆ ಸರಾಗವಾಗಿ ಪ್ರವೇಶಿಸುತ್ತಿವೆ.
ಇಲ್ಲಿನ ಆನೆ ಕಂದಕ ದುರಸ್ತಿ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರೂ ಅರಣ್ಯ ಇಲಾಖೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.