ಬೆಳ್ತಂಗಡಿ: ತಾಲೂಕಿನ ಮುಂಡಾಜೆಯ ಧುಂಬೆಟ್ಟು ಸಮೀಪವಿರುವ ಚಿಬಿದ್ರೆ ಗ್ರಾಮದ ನಳೀಲು ಪ್ರದೇಶದಲ್ಲಿ 2019ರ ಮೃತ್ಯುಂಜಯ ನದಿಯ ಪ್ರವಾಹದಿಂದ ಮುಚ್ಚಲ್ಪಟ್ಟಿದ್ದ ಆನೆ ಕಂದಕ ಮರು ನಿರ್ಮಾಣಗೊಂಡಿದೆ.
ಮುಂಡಾಜೆಯ ಧುಂಬೆಟ್ಟು,ಮಜಲು, ಕಜೆ,ಹಾಲ್ತೋಟ,,ಯಮುಂಡ್ರುಪಾಡಿ, ನಡುಮನೆ ಮೊದಲಾದ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಕಳೆದ ಹಲವು ಸಮಯದಿಂದ ವಿಪರೀತವಾಗಿದೆ.ಆನೆ ಕಂದಕ ಮುಚ್ಚಿ ಹೋಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಇದರ ಪರಿಶೀಲನೆಯನ್ನು ನಡೆಸಿದ್ದರು.
ಕಳೆದ ಶನಿವಾರ ಶಾಸಕ ಹರೀಶ್ ಪೂಂಜ ಮುಂಡಾಜೆಗೆ ಭೇಟಿ ನೀಡಿದ ಸಂದರ್ಭ ಸ್ಥಳೀಯರು ಈ ಬಗ್ಗೆ ಅವರ ಗಮನಕ್ಕೆ ತಂದಿದ್ದರು. ಮುಚ್ಚಿಹೋಗಿದ್ದ ಆನೆ ಕಂದಕವನ್ನು ಮರು ನಿರ್ಮಿಸಿಕೊಡುವ ಕುರಿತು ಭರವಸೆ ನೀಡಿದ ಶಾಸಕರು, ತಕ್ಷಣ ಸ್ಪಂದಿಸಿ ಸೋಮವಾರದಂದು ಕಂದಕವನ್ನು ನಿರ್ಮಿಸಿಕೊಡುವ ಕಾಮಗಾರಿ ನಡೆದಿದೆ.
ಸುಮಾರು 100 ಮೀ.ನಷ್ಟು ಆನೆ ಕಂದಕ ಮರು ನಿರ್ಮಾಣವಾಗಿದ್ದು ಇನ್ನಾದರೂ ಕಾಡಾನೆಗಳ ಕಾಟಕ್ಕೆ ಸಿಗಬಹುದೆಂಬ ನಿರೀಕ್ಷೆ ಪರಿಸರದ ಕೃಷಿಕರು ವ್ಯಕ್ತಪಡಿಸಿದ್ದಾರೆ. ಶಾಸಕರ ತುರ್ತು ಸ್ಪಂದನೆ ಸ್ಥಳೀಯರ ಶ್ಲಾಘನೆಗೆ ಪಾತ್ರವಾಗಿದೆ