ಮಂಗಳೂರು: ಕ್ಷುಲ್ಲಕ ವಿಷಯಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಕಾರ್ಸ್ಟ್ರೀಟ್ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಕಾರ್ ಸ್ಟ್ರೀಟ್ ನಿವಾಸಿ ವಿನಾಯಕ ಕಾಮತ್ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯ ಪತ್ನಿ ಅಮಾನಿ ಕಾಮತ್ ನೀಡಿದ ದೂರಿನ ಪ್ರಕಾರ, ಐದು ದಿನಗಳ ಹಿಂದೆ, ನಗರ ಪಾಲಿಕೆ ತಮ್ಮ ಕಟ್ಟಡದ ಪ್ರವೇಶದ್ವಾರದಲ್ಲಿ ಕೆಲವು ಕೆಲಸಗಳನ್ನು ಮಾಡಿತ್ತು. ಈ ವಿಚಾರದಲ್ಲಿ ವಿನಾಯಕ್ ಕಾಮತ್ ಹಾಗೂ ಕೃಷ್ಣಾನಂದ್ ಕಿಣಿ ನಡುವೆ ವಾಗ್ವಾದ ನಡೆದಿದೆ. ಅಂದಿನಿಂದ ಅವರು ಉತ್ತಮ ಸಂಬಂಧ ಹೊಂದಿರಲಿಲ್ಲ.
ನವೆಂಬರ್ 3 ರಂದು ರಾತ್ರಿ 11 ಗಂಟೆ ವೇಳೆಗೆ ಜನರು ಕಟ್ಟಡದಲ್ಲಿ ಪಟಾಕಿ ಸಿಡಿಸುತ್ತಿದ್ದರು ಮತ್ತು ವಿನಾಯಕ್ ವೀಕ್ಷಿಸಲು ತೆರಳಿದ್ದರು. ಆ ವೇಳೆ ವಿನಾಯಕ್ ಮತ್ತು ಕೃಷ್ಣಾನಂದ್ ನಡುವೆ ಜಗಳವಾಗಿತ್ತು. ಚೂರಿ ಇರಿತದಿಂದ ವಿನಾಯಕ್ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ತೀವ್ರ ರಕ್ತಸ್ರಾವದಿಂದ ಅವರು ಗುರುವಾರ ಮೃತಪಟ್ಟಿದ್ದಾರೆ.
ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.