ಮಂಗಳೂರು : ಗ್ರಾಮೀಣಾಭಿವೃದ್ಧಿ ಪಂಚಾಯತ್ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ತಾಲೂಕು ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ಬೆಂಗಳೂರಿನ ಸಾಹಸ್, ಐಐಎಚ್ಎಂಆರ್ ಹಾಗೂ ಯುನಿಸೆಫ್ ಸಹಯೋಗದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕೋವಿಡ್ -19 ಸೂಕ್ಷ್ಮ ನಡವಳಿಕೆ ಮತ್ತು ಲಸಿಕೆಯ ಕುರಿತು ಮಾಹಿತಿ, ಶಿಕ್ಷಣ ಹಾಗೂ ಸಂವಹನ ಕಾರ್ಯಾಗಾರವನ್ನು ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಆಶಾ ಕಾರ್ಯಕರ್ತೆಯರಿಗೆ ಮೆನ್ಯುಸ್ಟ್ಯೂರಿಯಲ್ ಕಪ್ ವಿತರಿಸಿ ಚಾಲನೆ ನೀಡಿದರು.
ಕೋವಿಡ್-19 ಆರಂಭಿಕ ಸಮಯದಲ್ಲಿ ಲಸಿಕೆ ಬಗ್ಗೆ ಜನರಿಗೆ ಹಿಂಜರಿಕೆ ಇತ್ತು. ಇದೀಗ ಲಸಿಕೆ ಪಡೆಯಲು ಮುಂದೆ ಬರುತ್ತಿದ್ದಾರೆ, ಇದು ಉತ್ತಮ ಬೆಳವಣಿಗೆ, ದೈನಂದಿನ ಜೀವನದಲ್ಲಿ ನೈರ್ಮಲ್ಯ ಹಾಗೂ ಶುಚಿತ್ವದ ಬಗ್ಗೆ ಕಾಳಜಿ ವಹಿಸಿದರೆ ವೈರಾಣುಗಳಿಂದ ಜಾಗರೂಕರಾಗಿ ಇರಬಹುದು ಎಂದು ಡಾ. ಸುಜಯ್ ಈ ಸಂದರ್ಭದಲ್ಲಿ ತಿಳಿಸಿದರು.
ಋತುಚಕ್ರ ನಿರ್ವಹಣೆ ಕುರಿತು ಸಾಹಸ್ ಸಂಸ್ಥೆಯ ರಾಧಿಕಾ ಮಾಹಿತಿ ನೀಡಿದರು. ಕೋವಿಡ್ ಲಸಿಕೆ, ಸೂಕ್ಷ್ಮ ನಡವಳಿಕೆ ಮತ್ತು ಲಸಿಕೆಯ ಕುರಿತು ಯುನಿಸೆಪ್ ಸಂಸ್ಥೆಯ ವಿಜಯ್ ಕುಮಾರ್ ಮಾತನಾಡಿದರು.
ಮಂಗಳೂರು ತಾಲೂಕು ಪಂಚಾಯತ್ ಮಾನೇಜರ್ ಸುವರ್ಣ ಹೆಗಡೆ, ಸ್ವಚ್ಚ ಭಾರತ್ ಮಿಷನ್ (ಗ್ರಾ) ಸಂಯೋಜಕ ನವೀನ್, ಸಾಹಸ್ ಸಂಸ್ಥೆಯ ಪ್ರಾಜೆಕ್ಟ್ ಸಂಯೋಜಕ ಸುದೇಶ್ ಕಿಣಿ ಇದ್ದರು. ಡೊಂಬಯ್ಯ ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.