ಮೈಸೂರು : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ನಿಯಂತ್ರಿಸಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದು ಹೀಗಾಗಿ ವಾರದಲ್ಲಿ ಶನಿವಾರ ಮತ್ತು ಭಾನುವಾರ ನಗರದ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯ ಮತ್ತು ಕಾರಂಜಿ ಪ್ರಕೃತಿ ಉದ್ಯಾನವನದ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಆದರೆ ವೀಕ್ಷಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮೃಗಾಲಯ ಮತ್ತು ಕಾರಂಜಿ ಕೆರೆಗೆ ಮಂಗಳವಾರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಸಾಮಾನ್ಯವಾಗಿ ಪ್ರತಿವಾರವೂ ಮಂಗಳವಾರ ಮೃಗಾಲಯ ಮತ್ತು ಕಾರಂಜಿಕೆರೆಗೆ ರಜೆಯಿದ್ದು, ಆ ದಿನ ಪ್ರವೇಶ ನಿರ್ಬಂಧಿಸಲಾಗುತ್ತಿತ್ತು. ಆದರೆ ವೀಕೆಂಡ್ ಕರ್ಫ್ಯೂ ಜಾರಿಯಾಗಿರುವ ಕಾರಣ ಶನಿವಾರ ಮತ್ತು ಭಾನುವಾರದ ಬದಲಿಗೆ ಮಂಗಳವಾರ ವೀಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಸರ್ಕಾರ ಎರಡು ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿರುವ ಕಾರಣ ಜನವರಿ 8, 9, 15 ಮತ್ತು 16ರಂದು ಮೃಗಾಲಯಕ್ಕೆ ಪ್ರವೇಶವಿರುವುದಿಲ್ಲ. ಬದಲಿಗೆ ಜನವರಿ 11 ಮತ್ತು 18ರಂದು ಮಂಗಳವಾರ ಪ್ರವಾಸಿಗರು ಭೇಟಿ ನೀಡಬಹುದಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.