ಕಡಬ :ಪ್ರಾಕೃತಿಕವಾಗಿ ದೊರೆಯುವ ಹೂವುಗಳನ್ನು, ತನ್ನ ಭಾವನೆಗೆ ತಕ್ಕಂತೆ ಜೋಡಿಸಿ ಅಂದದ ಹೂಮಾಲೆ ಕಟ್ಟುವ ಕಲೆಯನ್ನು ಕರಗತ ಮಾಡಿಕೊಂಡಿರುವ ಕಡಬ ಗ್ರಾಮದ ಪಿಜಕಳ ನಂದೋಳಿ ನಿವಾಸಿ ನೋಣಪ್ಪ ಗೌಡರ ಅಪರೂಪದ ಪ್ರತಿಭೆಯು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ವೃತಿಯಲ್ಲಿ ಚಾಲಕರಾಗಿದ್ದರೂ ಪ್ರವೃತ್ತಿಯಲ್ಲಿ ಹೂ ಮಾಲೆ ಕಟ್ಟುವ ಹವ್ಯಾಸ ಬೆಳೆಸಿಕೊಂಡಿರುವ ನೋಣಪ್ಪ ಗೌಡರು ಬಿಡುವಿನ ವೇಳೆ ಮನೆಯಲ್ಲಿ ಹೂಮಾಲೆ ಕಟ್ಟಿ ಸ್ಥಳಿಯ ದೇವಸ್ಥಾನಗಳಿಗೆ, ಶುಭ ಸಮಾರಂಭಗಳಿಗೆ, ಸಭಾ ವೇದಿಕೆಗಳ ಅಲಂಕಾರಕ್ಕೆ , ಉದ್ಘಾಟನಾ ಕಾರ್ಯಕ್ರಮದ ದೀಪ ಅಲಂಕಾರಕ್ಕೆ ಹೂವಿನ ಅಥವಾ ಅಡಿಕೆ ಹಿಂಗಾರದ ಮಾಲೆಯನ್ನು ಕಟ್ಟಿ ಉಚಿತವಾಗಿ ನೀಡುತ್ತಾರೆ. ತನ್ನ ಚಿಕ್ಕ ಮನೆಯಲ್ಲಿ ಪತ್ನಿ ಲಲಿತಾ ಹಾಗೂ ವಿದ್ಯಾರ್ಜನೆಯಲ್ಲಿರುವ ಪುತ್ರ ರಕ್ಷಿತ್, ಪುತ್ರಿ ರಶ್ಮಿತಾ ಒಳಗೊಂಡ ಪುಟ್ಟ ಸಂಸಾರವು ನೋಣಪ್ಪ ಗೌಡರ ಚಾಲಕ ವೃತ್ತಿಯಿಂದಲೇ
ಜೀವನ ಸಾಗಿಸುತ್ತಿದ್ದಾರೆ. ಬೇರೆ ಯಾವುದೇ ಅದಾಯದ ಮೂಲಗಳೂ ಇವರಿಗಿಲ್ಲ. ಆದರೂ ತನ್ನ ಹೂಮಾಲೆ ಕಟ್ಟುವ ಹವ್ಯಾಸವನ್ನು ಸೇವೆಯ ರೂಪದಲ್ಲಿ ನೀಡುವುದು ಇವರ ವಿಶೇಷ. ಪ್ರಕೃತಿಯಲ್ಲಿ ದೊರೆಯುವ ಕೇಪುಳು ಹೂ, ತುಳಸಿ ಎಲೆಗಳು,ಅಡಿಕೆಯ ಹಿಂಗಾರ ಮೊದಲಾದವುಗಳನ್ನು ಬಾಳೆಗಿಡದ ಬಳ್ಳಿ, ದರ್ಬೆ ಗಿಡವನ್ನು ದಾರದ ರೂಪದಲ್ಲಿ ಮಾಡಿ ಹೂವುಗಳನ್ನು, ಹಿಂಗಾರವನ್ನು ಪೋಣಿಸುತ್ತಾರೆ. ಅಂದ ಹೆಚ್ಚಿಸಲು ಕೆಲವೊಂದು ಬಾರಿ ಬಣ್ಣದ ದಾರವನ್ನೂ ಉಪಯೋಗಿಸುತ್ತಾರೆ. ಅತ್ಯಂತ ಸೂಕ್ಷ್ಮವಾಗಿರುವ ಈ ಕೆಲಸಕ್ಕೆ ತಾಳ್ಮೆ ಮತ್ತು ಸಮಯ ಅವಶ್ಯವಾಗಿದೆ.
ಹಲವು ವರ್ಷಗಳಿಂದ ಈ ಹವ್ಯಾಸವನ್ನು ಬೆಳೆಸಿಕೊಂಡಿರುವ ಅವರು ಈ ಹೂಮಾಲೆ ರಚನಾ ವಿಷಯದಲ್ಲಿ ಯಾರ ಬಳಿಯೂ ತರಬೇತಿ ಪಡೆದವರಲ್ಲ. ತನ್ನ ಯೋಚನಾ ಶಕ್ತಿಯನ್ನು ಬಳಸಿ ವಿವಿಧ ರೂಪಗಳ ಹೂಮಾಲೆಗಳನ್ನು ಕಟ್ಟುತ್ತಾರೆ. ಕಿರೀಟ ಮಾಲೆ, ಕನ್ನಡಿ ಮಾಲೆ,ಮದುವೆ ಹಾರಗಳು, ದೈವದ
ರೂಪಕ್ಕೆ ಹೊಂದಿಕೊಳ್ಳುವ ಹೊಲುವ ಹೂಮಾಲೆ ಇವರ ಕೈಚಲಕದಿಂದ ಮೂಡುತ್ತವೆ. ಈ ಹಿಂದೆ ಶುಭ ಕಾರ್ಯಕ್ರಮವೊಂದರಲ್ಲಿ ಅಲಂಕಾರಿಕವಾಗಿಟ್ಟ ತನ್ನ ಹೂಮಾಲೆಯನ್ನು ನೋಡಿ ಮಂಗಳೂರಿನ ದೇವಸ್ಥಾನವೊಂದರ ಮುಖ್ಯಸ್ಥರು ತಮಗೂ ಈ ತರಹದ ಹಾರಗಳನ್ನು
ಮಾಡಿಕೊಡುವಂತೆ ಬೇಡಿಕೆಯಿಟ್ಟಿದ್ದರು ಅದನ್ನು ಪೂರೈಸಿದ್ದೇನೆ. ಪ್ರಾಕೃತಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ನೀಡಿದ್ದಲ್ಲಿ, ಸ್ಥಳೀಯವಾಗಿ ಯಾವೂದೆ ಕಾರ್ಯಕ್ರಮಕ್ಕೆ ಹೂವಿನ ಹಾಗೂ ಹಿಂಗಾರದ ಮಾಲೆಗೆ ಬೇಡಿಕೆ ಬಂದರೆ ಹಾಗೂ ಮದುವೆಯಂದು ಗಂಡು ಹೆಣ್ಣು ಹಾಕುವ ಹಾರವನ್ನು ಅವರ ಬೇಡಿಕೆ ತಕ್ಕಂತೆ ರಚಿಸಿ ಯಾವೂದೆ ಫಲಾಪೇಕ್ಷೆಯಿಲ್ಲದೆ ನೀಡಲೂ ತಾನು ಸಿದ್ದ ಎನ್ನುತ್ತಾರೆ ನೋಣಪ್ಪ ಗೌಡರು. ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ, ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನ ಮೊದಲಾದ ಸ್ಥಳಿಯ ದೇವಸ್ಥಾನಕ್ಕೆ ವಿಶೇಷ ಹಬ್ಬಗಳ ದಿನಗಳಲ್ಲಿ ಹೂಮಾಲೆಯನ್ನು ದೇವರಿಗೆ ಅರ್ಪಿಸುತ್ತಾರೆ.
ಶುಭಕಾರ್ಯಗಳಲ್ಲಿ ಬಳಕೆ ಮಾಡುವ ಕಳಸದಲ್ಲಿದಿಡುವ ತೆಂಗಿನ ಕಾಯಿಯ ಮೇಲೆ ಸುಂದರ ಕಲಾಕೃತಿಗಳನ್ನು ರಚಿಸುವ ನೈಪುಣ್ಯತೆಯೂ ಇವರಿಗೆ ಕರಗತವಾಗಿದೆ.