ಮಂಗಳೂರು : ಶ್ರೀ ಕೃಷ್ಣ ಪರಮಾತ್ಮ ಅತ್ಯುತ್ತಮ ಮಾರ್ಗದರ್ಶಕ ಎಂದು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಅಭಿಪ್ರಾಯಪಟ್ಟರು.
ಅವರು ಆಗಸ್ಟ್ 30ರ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿಯವರ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೃಷ್ಣ ಜಯಂತಿಯಲ್ಲಿ ಮಾತನಾಡಿದರು.
ಕೃಷ್ಣ, ಕಂಸ ಸೇರಿದಂತೆ ದುಷ್ಟರನ್ನು ಸಂಹರಿಸಿದ ರೀತಿ, ಮಹಾಭಾರತದಲ್ಲಿ ಪಾಂಡವರೊಂದಿಗೆ ನಿಂತು ಧರ್ಮವನ್ನು ಕಾಪಾಡಿದ ರೀತಿಯನ್ನು ನೋಡುವಾಗ ಇಡೀ ಪ್ರಪಂಚಕ್ಕೆ ಹೇಗೆ ಮಾರ್ಗದರ್ಶಕರಾಗಿದ್ದರು ಎಂಬುದು ತಿಳಿಯುತ್ತದೆ ಎಂದರು.
ಇಂದು ಪ್ರತಿ ಮನೆಯಲ್ಲೂ ಮಕ್ಕಳಿಗೆ ಕೃಷ್ಣ ಪರಮಾತ್ಮನ ವೇಷ ತೊಡಿಸುವ, ಮಕ್ಕಳಲ್ಲಿ ಕೃಷ್ಣನನ್ನು ಕಾಣುತ್ತಾರೆ, ಆ ಮೂಲಕ ಮಕ್ಕಳು ಕೂಡಾ ಕೃಷ್ಣನಂತೆ ಆಗಲಿ ಎಂದರು.
ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ಮಧುಸೂದನ್, ದ.ಕ. ಗೊಲ್ಲ(ಯಾದವ) ಸಂಘದ ಅಧ್ಯಕ್ಷ ಪಿ.ಆರ್. ಕುಮಾರಸ್ವಾಮಿ, ಮಾಜಿ ಶಾಸಕ ಪದ್ಮನಾಭ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕೋವಿಡ್ – 19 ಸೋಂಕು ಹಿನ್ನಲೆಯಲ್ಲಿ ಈ ಬಾರಿ ಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಶಾಸಕರಾದ ವೇದವ್ಯಾಸ್ ಕಾಮತ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹಾಗೂ ಇತರೆ ಗಣ್ಯರು ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಸ್ವಾಗತಿಸಿ, ವಂದಿಸಿದರು.