ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಹಸಿರು ಗಾಜಿನ ಬಳೆಗಳ ಸ್ಥಾನವನ್ನು ಕೃತಕ ಆಭರಣಗಳು ಆಕ್ರಮಿಸಿಕೊಂಡಿವೆ. ಬಳೆಯು ಇಲ್ಲಿನ ಸಂಸ್ಕೃತಿ, ಧಾರ್ಮಿಕ ಆಚರಣೆಯೊಂದಿಗೆ ಬೆರೆತು ಹೋಗಿದೆ. ಇದರ ಬಳಕೆಯಲ್ಲಿ ಧರ್ಮ ಭೇದವಿಲ್ಲ. ಎಲ್ಲಾ ಧರ್ಮದ ಮಹಿಳೆಯರು ಕೈತುಂಬ ಬಳೆ ಧರಿಸಿ ಸಂಭ್ರಮಿಸುತ್ತಾರೆ.
ವಿಶೇಷ ಕಾರ್ಯಕ್ರಮಗಳಾದ ಮದುವೆ, ಸೀಮಂತ, ಹಬ್ಬ ಹರಿದಿನಗಳಲ್ಲಿ ಚಿನ್ನ, ಗಾಜು, ಪ್ಲಾಸ್ಟಿಕ್ ಬಳೆಗಳು ಮಹಿಳೆಯರ ಕೈಯನ್ನು ಅಲಂಕರಿಸುತ್ತವೆ. ಹಿಂದೂ ಧರ್ಮದ ಹಾಗೂ ಬಳೆಯ ನಡುವೆ ಅವಿನಾಭಾವ ಸಂಬಂಧವಿದೆ. ಇಲ್ಲಿ ಬಳೆ ಸೌಭಾಗ್ಯದ ಸಂಕೇತ. ಮದುವೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇದರ ಪಾತ್ರ ಹಿರಿದು. ಮದುವೆ ಸಮಾರಂಭದಲ್ಲಿ ವಧು ಸುಂದರವಾಗಿ ಕಾಣುವುದರಲ್ಲಿ ಬಳೆಗಳ ಪಾಲೂ ಇದೆ. ಸೀಮಂತದ ಸಂದರ್ಭದಲ್ಲಿ ಗರ್ಭಿಣಿಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸುವ ಸಂಪ್ರದಾಯವೂ ಇದೆ.
ಹಸಿರು ಗಾಜಿನ ಬಳೆಗಳು ಮಂಗಳದ ಸೂಚಕ. ಅದನ್ನು ತೊಟ್ಟು ಹೆಣ್ಣು ಮಕ್ಕಳು ಮನೆಯಲ್ಲಿ ಓಡಾಡುತ್ತಿದ್ದರೆ ಅದೇ ಹಬ್ಬ ಅನ್ನುತ್ತಾರೆ ಹಿರಿಯರು. ಮಹಿಳೆಗೆ ಮುತೈದೆ ಸ್ಥಾನ ತುಂಬುವಲ್ಲಿ ಮಂಗಳದಾಯಕವಾದಂತಹ ಮಧುರ ಮನಸ್ಸಿಗೆ ಮುದ ನೀಡುವ ಬಳೆಗಳು ಹೆಣ್ಣಿನ ಸೌಂದರ್ಯ ಹೆಚ್ಚಿಸುತ್ತವೆ.
ನಮ್ಮ ದೇಶದ ಸಂಸ್ಕೃತಿಯಲ್ಲಿ ಪ್ರತಿಯೊಂದು ಬಣ್ಣದ ಬಳೆಯೂ ಒಂದೊಂದು ಅರ್ಥವನ್ನು ಧ್ವನಿಸುತ್ತದೆ. ಕೆಂಪು ಬಣ್ಣದ ಬಳೆ ತೊಡುವುದರಿಂದ ಶಕ್ತಿ ಮತ್ತು ಉತ್ಸಾಹ ವೃದ್ಧಿಸಿದರೆ, ನೀಲಿ ಬಣ್ಣ ಬುದ್ಧಿವಂತಿಕೆ ಪ್ರತಿಪಾದಿಸುತ್ತದೆ. ನೇರಳೆ ಬಣ್ಣ ಸ್ವಾತಂತ್ರ್ಯ, ಹಸಿರು ಬಣ್ಣ ಅದೃಷ್ಟ, ಹಳದಿ ಬಣ್ಣ ಸಂತೋಷ, ಕೇಸರಿ ಬಣ್ಣ ಯಶಸ್ಸು, ಕಪ್ಪು ಮತ್ತು ಬಿಳಿ ಬಣ್ಣ ಕ್ರಮವಾಗಿ ಬಲ ಹಾಗೂ ಹೊಸ ಶಕೆಯನ್ನು ಅರ್ಥವನ್ನು ಧ್ವನಿಸುತ್ತದೆ. ಚಿನ್ನದ ಬಳೆಯನ್ನು ಧರಿಸುವುದರಿಂದ ಸುಯೋಗ ಮತ್ತು ಏಳಿಗೆ ಲಭಿಸುತ್ತದೆ ಎಂಬ ನಂಬಿಕೆ ಇದೆ.
ಇತ್ತೀಜಿನ ದಿನಗಳಲ್ಲಿ ಬಳೆಗಳನ್ನು ಒಂದು ಅದೃಷ್ಟ, ಸಂಪ್ರದಾಯ ಅಥವಾ ಫ್ಯಾಷನ್ಗಾಗಿ ಧರಿಸಲಾಗುತ್ತದೆ. ಮೊದಲು ಮಣ್ಣಿನಿಂದ ತಯಾರಾಗುತ್ತಿದ್ದ ಬಳೆಗಳು ಇಂದು ಮುತ್ತು, ರತ್ನ, ವಜ್ರಗಳಿಂದ ಕೂಡಿದೆ. ಆದರೆ ಅಂದಿನಿಂದ ಇಂದಿನವರೆಗೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ.