ಮಂಗಳೂರು: ಕೊರೊನಾ ಲಾಕ್ ಡೌನ್ನಿಂದ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ವಾರ್ಷಿಕ ಸಭೆಯು ನಗರದ ಬಲ್ಲಾಲ್ಬಾಗ್ ಬಳಿಯ ಜನತಾ ಡಿಲಕ್ಸ್ ಹೋಟೇಲಿನಲ್ಲಿ ಜರಗಿತು.
ಸಭೆಗೆ ವಿಶೇಷ ಅಭ್ಯಾಗತರಾಗಿ ಆಗಮಿಸಿದ್ದ ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು, ಪಟ್ಲ ಸ್ವತ: ಕಲಾವಿದ ನಾಗಿದ್ದು ತನ್ನ ಸಹಧ್ಯೋಗಿ ಕಲಾವಿದರ ನೋವಿಗೆ ಸ್ಪಂದಿಸುವ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರೆಂದರೆ ಪಟ್ಲ ಸತೀಶ್ ಶೆಟ್ಟಿಯವರು. ಯಕ್ಷಗಾನ ಕ್ಷೇತ್ರದಲ್ಲಿ ಎಳೆಯ ಪ್ರಾಯದಲ್ಲಿ ಮಹತ್ಕಾರ್ಯಗಳ ಮೂಲಕ ಆಪಾರ ಕೀರ್ತಿ ಸಂಪಾದನೆಯ ಜೊತೆಗೆ ಕಲಾವಿದರ ಕಣ್ಣೀರನ್ನು ಒರೆಸಲು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಿಸಿ ಕೇವಲ ಯಕ್ಷಗಾನ ಕಲಾವಿದರಿಗಲ್ಲದೆ ನಾಟಕ ರಂಗದ ಕಲಾವಿದರಿಗೆ, ಧೈವರಾಧನೆಯ ಕಲಾವಿದರಿಗೆ, ಪರಿಚಾರಕರಿಗೆ ಹಾಗೂ ಭರತನಾಟ್ಯ ಕಲಾವಿದರಿಗೆ ಸಹಾಯ ಮಾಡುವ ಮೂಲಕ ಕಲಾವಿದರ ಕಾಮಧೇನು ಆಗಿ ಪ್ರಖ್ಯಾತರಾಗಿದ್ದಾರೆಂದರು.
ಕಳೆದ ೬ ತಿಂಗಳಲ್ಲಿ ಫೌಂಡೇಶನಿನ ಸೇವಾ ಕಾರ್ಯದ ಮತ್ತು ಲೆಕ್ಕಪತ್ರದ ವಿವರಗಳನ್ನು ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ ಸಭೆಗೆ ಮಂಡಿಸಿದರು. ೨೦೨೧ರ ಲಾಕ್ ಡೌನಿನ ಈ ಆರು ತಿಂಗಳ ಸಂದರ್ಭದಲ್ಲಿ ಯಕ್ಷ ಗಾನದ, ನಾಟಕದ, ದೈವಾರಾ ದನೆಯ ಹಾಗೂ ಭರತನಾಟ್ಯದ ಸುಮಾರು ೨೧೦೦ ಕಲಾವಿದರಿಗೆ ಅಂದಾಜು ರೂ ೩೦-೦೦ ಲಕ್ಷ ಮೌಲ್ಯದ ಅಕ್ಕಿ ದಿನಸಿ ಸಾಮಾಗ್ರಿಗಳ ವಿತರಣೆ, ೧೮ ಮಂದಿ ಯಕ್ಷಗಾನ ಕಲಾವಿದರ ಮನೆ ರಿಪೇರಿ ಮತ್ತು ವೈದ್ಯಕೀಯ ನೆರವು ರೂ ೮-೭೫ ಲಕ್ಷ, ಇನ್ಸೂರೆನ್ಸ್ ಕಂಪೆನಿಗೆ ೯೧೪ ಮಂದಿ ಯಕ್ಷಗಾನ ಕಲಾವಿದರಿಗೆ ಅಪಘಾತ ವಿಮೆಯಾಗಿ ರೂ ೧೧.೧೫ ಲಕ್ಷ ಮತ್ತು ಯೂಟ್ಯೂಬ್ ಮೂಲಕ ಆನ್ ಲೈನ್ ನೇರ ಪ್ರಸಾರ ಯಕ್ಷಗಾನ ಪ್ರದರ್ಶನ, ತಾಳಮದ್ದಲೆ ಕಾರ್ಯಕ್ರಮ ಗಳನ್ನು ಜರಗಿಸ ಲಾಗಿದೆಯೆಂದು ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಸಭೆಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪಟ್ಲ ಫೌಂಡೇಶನ್ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರು, ಸೇವಾ ಕಾರ್ಯಗಳನ್ನು ಕಲಾಮಾತೆಯ, ಕಲಾಪೋಷಕರ ಹಾಗೂ ಕಲಾಭಿಮಾನಿಗಳ ಆಶೀರ್ವಾದ ಮತ್ತು ಸಹಕಾರದಿಂದ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ವಿವಿಧ ಘಟಕದಿಂದ ಆಗಮಿಸಿದ್ದ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಅರ್ಪಿಸಿದರು. ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಕ್ಷೇತ್ರದ ಹಲವಾರು ದಿಗ್ಗಜರು ನಮ್ಮನ್ನಗಲಿದ್ದು ಅವರೆಲ್ಲರಿಗೂ ನುಡಿ ನಮನಗಳನ್ನು ಯಕ್ಷಗಾನ ವಿದ್ವಾಂಸರಾದ ಫ್ರೊ.ಎಂ ಪ್ರಭಾಕರ ಜೋಷಿಯವರು ಅರ್ಪಿಸಿದರು. ವೇದಿಕೆಯಲ್ಲಿ ಉಪಸ್ಥಿತ ರಿದ್ದ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ರಾದ ಶ್ರೀ ಭುಜಬಲಿ ಧರ್ಮಸ್ಥಳ ಇವರು ಯಕ್ಷಗಾನದ ಕಲಾವಿದರಿಗೆ ಆಸರೆ ಯಾಗಿ ರುವ ಪಟ್ಲ ಫೌಂಡೇಶನಿಗೆ ಮತ್ತು ಸತೀಶ್ ಶೆಟ್ಟಿಯವರಿಗೆ ಅಭಿನಂದನೆಯನ್ನು ಸಲ್ಲಿಸಿ ಶ್ರೀ ಮಂಜುನಾಥ ಸ್ವಾಮಿಯ ಆಶೀ ರ್ವಾದ ಸದಾ ಇರಲೆಂದು ಹರಸಿದರು.
ಯಕ್ಷಗಾನ ರಂಗದ ಪ್ರಸಿದ್ಧ ವೇಷ ಧಾರಿಗಳಾದ ಸರಪಾಡಿ ಅಶೋಕ್ ಶೆಟ್ಟಿ ಮತ್ತು ಶ್ರೀಮತಿ ಪೂರ್ಣಿಮ ಯತೀಶ್ ರೈಯವರು ಫೌಂಡೇಶನ್ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದ ಫೌಂಡೇಶನಿನ ಸದಸ್ಯರಾದ ಕುಮಾರಿ ಬಿಂದಿಯಾ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ , ಜಯಶೀಲ ಅಡ್ಯಂತಾಯ , ರವಿ ಶೆಟ್ಟಿ ಅಶೋಕನಗರ ಮತ್ತು ಪುರುಷೋತ್ತಮ ಭಂಡಾರಿ ಅಡ್ಯಾರ್ ಇವರುಗಳನ್ನು ಗಣ್ಯರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು. ವೇದಿಕೆಯಲ್ಲಿ ಫೌಂಡೇಶನಿನ ಪದಾಧಿ ಕಾರಿಗಳಾದ ಡಾ| ಮನು ರಾವ್, ದುರ್ಗಾ ಪ್ರಸಾದ್ ಪಡುಬಿದ್ರಿ, ಶ್ರೀಮತಿ ಆರತಿ ಆಳ್ವ ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಶೇಖಬ್ಬ ಇವರು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸಿದ ಬಗ್ಗೆ ಗೌರವಿಸಲಾಯಿತು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಧನ್ಯವಾದ ಸಮರ್ಪಿಸಿದರು.