ಬಂಟ್ವಾಳ: ಮುಂಬರುವ ರಾಜ್ಯದ ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಮಂಗಳೂರು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭವಿಷ್ಯ ನುಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮದಿನಾಚರಣೆಯ ಅಂಗವಾಗಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಪುದು ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಮೇರಮಜಲು ಗ್ರಾಮದ ಪಕ್ಕಳಪಾದೆ ಸರಸ್ವತಿ ಮಂದಿರದ ಬಳಿ ನಡೆದ ಸೇವೆ ಮತ್ತು ಸಮರ್ಪಣಾ ಕಾರ್ಯಕ್ರಮ ಹಾಗೂ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಿಜೆಪಿಗೆ ಕಾರ್ಯಕರ್ತರೇ ಶಕ್ತಿ ಮತಗಟ್ಟೆಯ ಅಧ್ಯಕ್ಷನಿಂದ ಬಿಜೆಪಿ ಪಕ್ಷ ಬೆಳೆದಿದ್ದು, ಆತನೇ ಬೂತ್ಗೆ ಸುಪ್ರಿಂ ಎಂದ ಅವರು ಮುಂದಿನ 20 ವರ್ಷ ಕಾಂಗ್ರೆಸ್ ಪಕ್ಷ ನಿರುದ್ಯೋಗಿಗಳ ಪಕ್ಷವಾಗಲಿದೆ. ಅಧ್ಯಕ್ಷರನ್ನೇ ಆಯ್ಕೆ ಮಾಡಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಹಲವು ಮಂದಿ ರಾಜ್ಯದಲ್ಲಿ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಭವಿಷ್ಯದಲ್ಲಿ ಯಾವುದೇ ಗುಡಿ, ಗೋಪುರಗಳನ್ನು ಕೆಡವದಂತೆ ವಿಶೇಷ ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ತಂದಿದ್ದಾರೆ. ಹಿಂದುತ್ವ ವಿಚಾರಧಾರೆಯಲ್ಲಿ ಯಾವುದೇ ರಾಜಿಯಿಲ್ಲ. ದೇವಸ್ಥಾನದ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ಸಿಗರು ರಾಜಕಾರಣಕ್ಕಾಗಿ, ಹಿಂದುಗಳ ಮತ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಮಾತನಾಡಿ, ಮಂಗಳೂರು ಮಂಡಲದಲ್ಲಿ ಯಶಸ್ವಿಯಾಗಿ ಸಂಘಟನಾ ಕಾರ್ಯ ನಡೆಯುತ್ತಿದ್ದು ಇದೇ ರೀತಿ ಮುಂದುವರಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಮೈಸೂರು ಎಲೆಕ್ಟಿಕಲ್ ಮತ್ತು ಇಂಡಸ್ಟ್ರೀಸ್ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಮಂಗಳೂರು ಮಂಡಲದ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಅಲೆಮಾರಿ ಅರೆ ಅಲೆಮಾರಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಹಾಸ್ ಉಲ್ಲಾಳ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ,ಬೂತ್ ಅಧ್ಯಕ್ಷ ಮೋಹನದಾಸ್ ಬಡೂರು, ನವೀನ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.ಮೇರಮಜಲು ಗ್ರಾ.ಪಂ. ಅಧ್ಯಕ್ಷೆ ಜಯಶ್ರಿ ಕರ್ಕೆರಾ ಸ್ವಾಗತಿಸಿದರು. ಪುದು ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಡ ವಂದಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಕಾರ್ಯಕ್ರಮ ನಿರೂಪಿಸಿದರು. ಸೇವಾ ಸಮರ್ಪಣ ಕಾರ್ಯಕ್ರಮದಂಗವಾಗಿ ಮೇರಮಜಲು ಮಾತಾ ಲಕ್ಷಣಿ ಅಮ್ಮ ವೃದ್ಧಾಶ್ರಮಕ್ಕೆ ಅಕ್ಕಿ ಹಾಗೂ ಹಣ್ಣುಹಂಪುಗಳನ್ನು ವಿತರಿಸಲಾಯಿತು. ಬೂತ್ ಅಧ್ಯಕ್ಷ ಹರೀಶ್ ಪಾದೆಮಾರ್ ಅವರ ಮನೆಗೆ ನಳಿನ್ ಕುಮಾರ್ ಕಟೀಲು ಭೇಟಿ ನೀಡಿ ನಾಮಫಲಕ ಅಳವಡಿಸಿದರು.