ಬೆಳ್ತಂಗಡಿ : ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಅನುದಾನಗಳನ್ನು ಕಾಯುತ್ತಿರುವ ಪಂಚಾಯತುಗಳು ಒಂದೆಡೆಯಾದರೆ ಕೆಲವು ಪಂಚಾಯತ್ಗಲ್ಲಿ ತಿಂಗಳಾಂತ್ಯಕ್ಕೆ ಸಿಬ್ಬಂದಿಗೆ ವೇತನ ನೀಡಲು ಪರದಾಡುವ ಅದೆಷ್ಟೋ ಪಂಚಾಯತುಗಳಿವೆ. ಆದರೆ ಇಲ್ಲೊಂದು ಪಂಚಾಯತ್ ವಿಭಿನ್ನವಾಗಿ ಕಂಡು ಬರುತ್ತಿದೆ. ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾ.ಪಂ. ಸುಮಾರು ೭೦೦ ಅಡಿಕೆ ಸಸಿಗಳನ್ನು ನೆಟ್ಟು ಆದಾಯಕ್ಕೊಂದು ಉಪಾಯ ಕಂಡುಕೊಳ್ಳುವ ಮೂಲಕ ಗಮನ ಸೆಳೆದಿದೆ.
ರುದ್ರಭೂಮಿ ಜಾಗದಲ್ಲಿ ಸಸಿ ನಾಟಿ
ಪಡಂಗಡಿ ಗ್ರಾ.ಪಂ.ನ ಗುತ್ತಿಗುಡ್ಡೆಯಲ್ಲಿ ಹಿಂದೂ ರುದ್ರಭೂಮಿ ಇದೆ. ಇದರಲ್ಲಿ ೩.೭೫ ಎಕ್ರೆ ಜಾಗವಿದ್ದು, ಉಳಿಕೆ ಜಾಗವನ್ನು ಅಡಿಕೆ ನಾಟಿಗೆ ಬಳಸಿಕೊಳ್ಳಲಾಗಿದೆ. ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರ ಸಹಕಾರದಲ್ಲಿ ಗ್ರಾ.ಪಂ.ನ ಸ್ವಂತ ಅನುದಾನ ರೂ. ೩.೫೦ ಲಕ್ಷವನ್ನು ಬಳಕೆ ಮಾಡಿ ಜಾಗವನ್ನು ಸಮತಟ್ಟು ಮಾಡಿ, ಗುಂಡಿ ತೆಗೆದು, ಮಂಗಳ ಜಾತಿಯ ಅಡಿಕೆ ಸಸಿಯನ್ನು ನೆಡಲಾಗಿದೆ. ತೋಟದಲ್ಲಿ ಕೊಳವೆ ಬಾವಿ ಇದ್ದು, ಸ್ಲಿಂಕ್ಲೇರ್ ಮೂಲಕ ಸಸಿಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಇದರ ಜವಾಬ್ದಾರಿಯನ್ನು ಪಂಚಾಯತ್ನ ಪಂಪು ಚಾಲಕ ಚಂದ್ರಕಾಂತ್ ಮಲ್ಲಿಪ್ಪಾಡಿ ನಿರ್ವಹಿಸುತ್ತಿದ್ದಾರೆ.
ಪಂಚಾಯತ್ನಿಂದಲೇ ನಿರ್ವಹಣೆ
ನಾಟಿ ಮಾಡಿರುವ ಅಡಿಕೆ ಸಸಿಗಳಿಗೆ ಗೊಬ್ಬರ, ನೀರು ಹೀಗೆ ಪೂರ್ಣ ನಿರ್ವಹಣೆಯನ್ನು ಪಂಚಾಯತ್ನಿಂದಲೇ ನಿರ್ವಹಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ಪಂಚಾಯತು ಉಪಾಧ್ಯಕ್ಷರಾಗಿದ್ದ ಸಂತೋಷ್ ಕುಮಾರ್ ಜೈನ್ ಅವರಿಂದ ಈ ಯೋಜನೆ ರೂಪಿತಗೊಂಡಿತ್ತು. ಅದಕ್ಕಾಗಿ ಗುತ್ತಿಗಾಡು ಪ್ರದೇಶದಲ್ಲಿ ಕೊಳವೆಬಾವಿ ಕೊರೆಯಲಾಗಿತ್ತು.
ಗ್ರಾ.ಪಂ.ಗೆ ಆದಾಯ
ನೆಟ್ಟಿರುವ ೭೦೦ ಸಸಿಗಳಲ್ಲಿ ಮುಂದಿನ ನಾಲ್ಕೈದು ವರ್ಷಗಳಲ್ಲಿ ಆದಾಯ ಬರುವ ನಿರೀಕ್ಷೆಯನ್ನು ಪಂಚಾಯತು ಇಟ್ಟುಕೊಂಡಿದೆ. ಆರಂಭದ ಒಂದೆರಡು ವರ್ಷದಲ್ಲಿ ಅಲ್ಪ ಪ್ರಮಾಣದ ಆದಾಯ ಗಳಿಸಿದರೂ ಬಳಿಕ ಪ್ರತೀ ವರ್ಷ ೧೫ ಕ್ವಿಂಟಾಲಿನಷ್ಟು ಅಡಿಕೆ ಪಡೆಯಲು ಸಾಧ್ಯವಾಗಲಿದೆ. ಈಗಿನ ಮಾರುಕಟ್ಟೆ ಮೌಲ್ಯಕ್ಕೆ ಹೋಲಿಸಿದರೆ ವರ್ಷಕ್ಕೆ ಸರಾಸರಿ ರೂ. ೬.೭೫ ಲಕ್ಷ ಆದಾಯವನ್ನು ಪಂಚಾಯತು ಗಳಿಸಲಿದೆ. ಮುಂದಿನ ದಿನಗಳಲ್ಲಿ ಒಟ್ಟು ೨೦೦೦ ಅಡಿಕೆ ಸಸಿಗಳನ್ನು ಬೆಳೆಸುವ ಇರಾದೆಯನ್ನು ಪಂಚಾಯತು ಹೊಂದಿದೆ.