ಮಂಗಳೂರು:ನೂತನವಾಗಿ ಕಾಂಕ್ರೀಟಿಕರಣ ಗೊಂಡ ಚಿಲಿಂಬಿ ಹಿಲ್ ಡೇಲ್ ಕ್ರಾಸ್ ರಸ್ತೆಯನ್ನು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಶುಕ್ರವಾರ ರಸ್ತೆಯ ನಿವಾಸಿಗಳು ಆಯೋಜಿಸಿದ್ದ ಸಮಾರಂಭದಲ್ಲಿ ಉದ್ಘಾಟಿಸಿದರು. ವೇದವ್ಯಾಸ್ ಕಾಮತ್ ಮಾತನಾಡಿ, ಕಳೆದ ಕೆಲವು ವರ್ಷಗಳಲ್ಲಿ ಮಂಗಳೂರು ನಗರ ಸಾಕಷ್ಟು ಸುಧಾರಿಸಿದೆ. ರೂ. 13.50 ಲಕ್ಷ ವೆಚ್ಚದಲ್ಲಿ ಅನುಷ್ಠಾನಗೊಳಿಸಿರುವ ಈ ಯೋಜನೆಗೆ ಚಾಲನೆ ನೀಡಿದ ರಸ್ತೆಯ ನಿವಾಸಿಗಳು, ವಾರ್ಡ್ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ಯ ಹಾಗೂ ಸಕ್ರೀಯವಾಗಿ ಕಾಮಗಾರಿ ಕೈಗೊಂಡ ರಸ್ತೆ ಗುತ್ತಿಗೆದಾರ ವೇಣುಗೋಪಾಲ ಶೆಟ್ಟಿ ಅವರನ್ನು ಅಭಿನಂದಿಸಿದರು. “ನಗರದ ಸೌಂದರ್ಯೀಕರಣಕ್ಕಾಗಿ ನಾವು ಪ್ರಮುಖ ಯೋಜನೆಗಳನ್ನು ಹೊಂದಿದ್ದೇವೆ. ಸುಮಾರು 30 ಕೆರೆಗಳು ಮತ್ತು 43 ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲಾಗುವುದು. ರೂ. 16 ಕೋಟಿ ವೆಚ್ಚದಲ್ಲಿ ಎಲ್ಇಡಿ ಬೀದಿ ದೀಪ ಅಳವಡಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ,” ಎಂದು ಅವರು ಹೇಳಿದರು.
ಈ ಸಂದರ್ಭ ಶಾಸಕ ಡಿ.ವೇದವ್ಯಾಸ್ ಕಾಮತ್, ವಾರ್ಡ್ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್ ಹಾಗೂ ರಸ್ತೆ ಗುತ್ತಿಗೆದಾರ ವೇಣುಗೋಪಾಲ ಶೆಟ್ಟಿ ಅವರನ್ನು ರಸ್ತೆಯ ನಿವಾಸಿಗಳು ಸಮ್ಮಾನಿಸಿದರು.
ಕೆನರಾ ಬ್ಯಾಂಕ್ ಹಿಲ್ ಸೈಡ್ ಅಪಾರ್ಟ್ಮೆಂಟ್ ಅಧ್ಯಕ್ಷ ಪೂರ್ಣಚಂದ್ರ ರಾವ್, ಲೇಡಿ ಹಿಲ್ ರೆಸಿಡೆನ್ಸಿ ಅಪಾರ್ಟ್ಮೆಂಟ್ ಅಧ್ಯಕ್ಷ ಸತೀಶ್ ಬೈಕಂಪಾಡಿ, ಚಿಲಿಂಬಿ ಹೈಟ್ಸ್ ಅಪಾರ್ಟ್ಮೆಂಟ್ ಅಧ್ಯಕ್ಷೆ ಪ್ರೇಮಾ ಡಿಸೋಜಾ, ಸಿಲ್ವರ್ ಸ್ಯಾಂಡ್ ಅಪಾರ್ಟ್ಮೆಂಟ್ ಕಾರ್ಯದರ್ಶಿ ಅರುಣ್ ರಾಡ್ರಿಗಸ್ ಹಾಗೂ ಹಿಲ್ ಡೇಲ್ ಮ್ಯಾನರ್ ಅಪಾರ್ಟ್ಮೆಂಟ್ ನ ಮೋಹನ್ ಕಿಣಿ, ರಾಕಿ ಡಿಸೋಜಾ, ಜಯಂತ್ ಪೂಜಾರಿ, ಆಶಾಲತಾ ಕಾಮತ್, ಅನಿಲ್ ಸಿಕ್ವೇರಾ, ರವಿಶಂಕರ್ ರಾವ್ ಉಪಸ್ಥಿತರಿದ್ದರು.
ಪಣಂಬೂರು ನರಸಿಂಹ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಶೈಲಜಾ ರಾವ್ ಪ್ರಾರ್ಥಿಸಿದರು. ಶಿಕಾ ಗಗನ್ ಕಾರ್ಯಕ್ರಮ ನಿರೂಪಿಸಿದರು.